ಮಾನ್ವಿ : ಪಟ್ಟಣದ ಯೋಗ ಸನ್ನಿಧಿಯಲ್ಲಿ ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್, ಮಾನ್ವಿ ಹಾಗೂ ಖ್ಯಾತ ಅದಿತಿ ಟ್ರಸ್ಟ್ ಅವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ 1 ವಾರದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಉತ್ಸಾಹಭರಿತವಾಗಿ ಜರುಗಿತು. ಈ ಸಂದರ್ಭದಲ್ಲಿ ಬೆಂಗಳೂರು ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಖ್ಯಾತ ಯೋಗ ಗುರು ಕರಿಬಸಪ್ಪ ಜೀ ಮಾತನಾಡಿ, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮನಸ್ಸಿನ ಶಾಂತಿ ಮತ್ತು ಸಮತೋಲನಕ್ಕೆ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು. ನಿಯಮಿತ ಯೋಗಾಭ್ಯಾಸದಿಂದ ಒತ್ತಡ ನಿವಾರಣೆ ಆಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವೆಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಮಧುಸೂದನ್, ಇಂದಿನ ಜೀವನಶೈಲಿಯಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸುವುದು ಹೆಚ್ಚಾಗಿದ್ದು, ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಿದರು. ಆದ್ದರಿಂದ ಮಹಿಳೆಯರು ಯೋಗವನ್ನು ಜೀವನಶೈಲಿಯಾಗಿ ಅಳವಡಿಸಿಕೊಂಡು ದಿನನಿತ್ಯ ಯೋಗಾಭ್ಯಾಸ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಹಿಳೆಯರ ಆರೋಗ್ಯವೇ ಕುಟುಂಬದ ಹಾಗೂ ಸಮಾಜದ ಅಭಿವೃದ್ಧಿಗೆ ಆಧಾರವಾಗಿರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶತಾಯುಷಿ ರಾಮಲಿಂಗಮ್ಮ ನಂದಿಹಾಳ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಲಿಂಗಸಗೂರು ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ರಾಜಶೇಖರ್ ಹೆಚ್ ಅವರು ಯೋಗ ಶಿಬಿರಾರ್ಥಿಗಳಿಗೆ ಯೋಗ ಮ್ಯಾಟ್ಗಳನ್ನು ವಿತರಿಸಿ, ಯೋಗಾಭ್ಯಾಸವನ್ನು ನಿರಂತರವಾಗಿ ಮುಂದುವರಿಸಲು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಗೌರಮ್ಮ ಮಹಾಂತಯ್ಯ ಸ್ವಾಮಿ, ದೀಪ್ತಿ, ಸುಮಾ ಶಂಕರಗೌಡ, ಮಂಜುಳಾ ದೇವಯ್ಯ ಶಿವಪೂಜಿ, ಶಿಕ್ಷಕರಾದ ಶರಣಯ್ಯ ಸ್ವಾಮಿ, ಯೋಗ ಗುರುಗಳಾದ ಅನ್ನದಾನಯ್ಯ ಸ್ವಾಮಿ ಸೇರಿದಂತೆ ಅನೇಕ ಶಿಬಿರಾರ್ಥಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಟ್ರಸ್ಟ್ ಸದಸ್ಯರು ಹಾಗೂ ಸ್ವಯಂಸೇವಕರು ಶ್ರಮಿಸಿದರು.



