ತಾಳಿಕೋಟಿ: ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಪ್ರೀತಿ ಮತ್ತು ಶಾಂತಿಯನ್ನೇ ಬೋಧಿಸಿವೆ ಪ್ರತಿಯೊಬ್ಬರು ತಮ್ಮ ಧರ್ಮಗಳನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳುವ ಅಗತ್ಯ ಇದೆ ಎಂದು ಖ್ಯಾತ ಪ್ರವಚನಕಾರ ಲಾಲಹುಸೇನ ಕಂದಗಲ್ಲ ಹೇಳಿದರು. ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ನಗರ ಶಾಖೆಯು ಪವಿತ್ರ ರಮಜಾನ್ ಮಾಸದ ನಿಮಿತ್ಯ ಆಯೋಜಿಸಿದ ಸೌಹಾರ್ದ ಇಫ್ತಾರ ಕೂಟ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ದೇವಭಯದ ಗುಣ ಬೆಳಸಲಿಕ್ಕಾಗಿ ಮುಸ್ಲಿಂರ ಮೇಲೆ ರಮಜಾನ್ ಉಪವಾಸ ವೃತಗಳನ್ನು ಕಡ್ಡಾಯಗೊಳಿಸಲಾಗಿದೆ. ನಾನು ಎಲ್ಲಿದ್ದರೂ ನನ್ನ ಸೃಷ್ಟಿಕರ್ತ ನನ್ನನ್ನು ನೋಡುತ್ತಿದ್ದಾನೆ ಎಂಬ ಪ್ರಜ್ಞೆ ಒಬ್ಬ ವ್ಯಕ್ತಿಯಲ್ಲಿ ಬಂದಾಗ ಅವನು ಎಲ್ಲ ರೀತಿಯ ಕೆಡುಕು ಮತ್ತು ಅಪರಾಧಗಳಿಂದ ಉಳಿಯುತ್ತಾನೆ. ಉಪವಾಸ ವೃತ್ತಗಳ ಮೂಲಕ ಒಬ್ಬ ವ್ಯಕ್ತಿಯಲ್ಲಿ ಹಸಿವಿನ ಅರಿವನ್ನು ಮೂಡಿಸಲಾಗುತ್ತದೆ ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಇದರಿಂದ ಬೆಳೆಯುತ್ತದೆ.ರಮಜಾನ ಕರುಣೆ, ಸಹಾನುಭೂತಿಯ ಮಾಸವಾಗಿದೆ. ಭೂಮಿಯ ಮೇಲೆ ಇರುವಷ್ಟು ದಿನ ಒಳ್ಳೆಯ ವ್ಯಕ್ತಿ ಗಳಾಗಿ ಬದುಕಬೇಕು ನಾವೆಲ್ಲರೂ ಒಂದು ದಿನ ಈ ಜಗತ್ತನ್ನು ತೊರೆಯಬೇಕಾಗಿದೆ ಆ ದೇವನು ನಾವು ಮಾಡಿದ ಎಲ್ಲ ಕರ್ಮಗಳ ಲೆಕ್ಕವನ್ನು ನಮ್ಮಿಂದ ಪಡೆಯಲಿಕ್ಕಿದ್ದಾನೆ ಎಂಬ ಜಾಗೃತ ಪ್ರಜ್ಞೆಯೊಂದಿಗೆ ನಾವೆಲ್ಲರೂ ಬದುಕಬೇಕಾಗಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಹಾಗೂ ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿ ಎಲ್ಲಾ ಧರ್ಮೀಯರು ಒಂದಾಗಿ ಸೌಹಾರ್ದದಿಂದ ಬದುಕಿದಾಗ ಮಾತ್ರ ದೇಶದಲ್ಲಿ ಶಾಂತಿ ಹಾಗೂ ಸುಭಿಕ್ಷೆ ಬರಲು ಸಾಧ್ಯ ಇಂತಹ ಸೌಹಾರ್ದ ಕಾರ್ಯಕ್ರಮ ಆಯೋಜಿಸಿದ ಸಂಘಟಕರಿಗೆ ಅಭಿನಂದಿಸುತ್ತೇವೆ ಎಂದರು. ವೇದಮೂರ್ತಿ ಮುರುಗೇಶ ವಿರಕ್ತಮಠ ಸಾನಿಧ್ಯ ವಹಿಸಿ ಮಾತನಾಡಿ ಪಟ್ಟಣದಲ್ಲಿ ಎಲ್ಲರೂ ಒಂದಾಗಿ ಪ್ರೀತಿ ಮತ್ತು ವಿಶ್ವಾಸದಿಂದ ಬದುಕುತ್ತಿದ್ದೇವೆ ಖಾಸ್ಗತಜ್ಜನ ಕೃಪೆ ನಮ್ಮೆಲ್ಲರ ಮೇಲಿದೆ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಜಮಾತ್ ಪದಾಧಿಕಾರಿಗಳಿಗೆ ಅಭಿನಂದಿಸುತ್ತೇನೆ ಎಂದರು. ಪತ್ರಕರ್ತ ಅಬ್ದುಲ್ ಗನಿ ಮಕಾನದಾರ ಪ್ರಸ್ತಾವಿಕವಾಗಿ ಮಾತನಾಡಿದರು. ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು, ವೇದಿಕೆ ಕಾರ್ಯಕ್ರಮದ ನಂತರ ಸಾಮೂಹಿಕ ಇಫ್ತಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಮಾತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ರೆಹಮಾನ ನಾಸೀರ,ಜಾಮಿಯಾ ಮಸೀದಿ ಅಧ್ಯಕ್ಷ ಕೆ.ಐ.ಸಗರ,ರೆಡ್ಡಿ ಸಮಾಜದ ಅಧ್ಯಕ್ಷರಾದ ಎಚ್ಎಸ್ ಪಾಟೀಲ, ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್ಲ, ದಲಿತ ಮುಖಂಡ ಜೈ ಭೀಮ್ ಮುತ್ತಗಿ, ಮಹಾಂತೇಶ ಮುರಾಳ, ಶಿವಾನಂದ ಹೂಗಾರ, ರವೀಂದ್ರ ಕಟ್ಟಿಮನಿ, ಅಶೋಕ ಚಿನಗುಡಿ,ಡಾ.ಸೋಮಶೇಖರಯ್ಯ ಹಿರೇಮಠ, ಸಿಆರ್ಸಿ ಬಾಲಾಜಿ ವಿಜಾಪುರ, ಶಿಕ್ಷಕ ರಾಜಶೇಖರ ಹಿರೇಮಠ, ಸುರೇಶ ಬೀರಗೊಂಡ, ಆಸೀಫ್ ಕೆಂಭಾವಿ, ಗೋಪಾಲ ಕಟ್ಟಿ ಮನಿ, ಡಾ.ಎ.ಎ.ನಾಲಬಂದ,ಡಾ.ನಜೀರ ಕೋಳ್ಯಾಳ,ಎ.ಡಿ.ಎಕೀನ, ರೋಶನ ಡೋಣಿ, ಎಂ.ಎ.ಮೇತ್ರಿ, ಹಸನಸಾಬ ಮನಗೂಳಿ,ಎಸ್.ಎ.ನಾಲಬಂದ ಹಾಗೂ ಸರ್ವ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು. ಜಮಾತೆ ಇಸ್ಲಾಮಿ ಹಿಂದ್ ನಗರ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *