ಕೊಪ್ಪಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಗೆ ಕೆಲ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಹಿಂದಿನ ಬಜೆಟ್ಗಳಲ್ಲಿ ಘೋಷಿಸಲಾಗಿದ್ದ ಹಳೆಯ ಯೋಜನೆಗಳನ್ನೇ ಮರು ಪ್ರಸ್ತಾಪಿಸಿದ್ದಾರೆ.
ಬಜೆಟ್ ಪೂರ್ವದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದಂತೆ ಮುನಿರಾಬಾದ್-ಟಿಬಿ ಡ್ಯಾಂನಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಒದಗಿಸಲು ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದ್ದು, ಜಿಟಿಟಿಸಿ-ಎಂಎಸ್ಡಿಸಿಯಲ್ಲಿ ಟಾಯ್ ಕ್ಲಸ್ಟರ್ ಕೈಗಾರಿಕೆಯ ಕಾರ್ಯತಂತ್ರದ ಸಹಯೋಗದಲ್ಲಿ ₹20ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾಗಲಿದ್ದು, ಇದು ಜಿಲ್ಲೆಯ ಪ್ರಗತಿಗೂ ಪೂರಕವಾಗಲಿದೆ.
ತುಂಗಭದ್ರಾ ಜಲಾಶಯದಲ್ಲಿ ಶಿಥಿಲಗೊಂಡಿರುವ 33 ಕ್ರೆಸ್ಟ್ಗೇಟ್ಗಳನ್ನು ಬದಲಾಯಿಸಿ ಹೊಸ ಗೇಟ್ಗಳನ್ನು ಅಳವಡಿಸುವ ಕಾರ್ಯವನ್ನು ಮುಂಗಾರು ಪೂರ್ವದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿರುವ ಮುಖ್ಯಮಂತ್ರಿ ಅವರು ಜಲಾಶಯದಲ್ಲಿ ಹೂಳಿನ ಶೇಖರಣೆಯಿಂದ ಆಗಿರುವ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಕನಕಗಿರಿ ತಾಲ್ಲೂಕಿನ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಸೇರಿದಂತೆ ಪರ್ಯಾಯ ಮಾರ್ಗೋಪಯಾಗಳ ಕುರಿತು ಈಗಾಗಲೇ ಚಿಂತಿಸಲಾಗಿದೆ ಎಂದಿದ್ದಾರೆ. ಈ ಯೋಜನೆಯನ್ನು ಹಿಂದೆಯೇ ಘೋಷಿಸಿದ್ದರೂ ಈಗಲೂ ಕಾಗದಕ್ಕೆ ಸೀಮಿತವಾಗಿದೆ.
ಅಂಜನಾದ್ರಿ ಬೆಟ್ಟವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ₹100 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುವುದು ಎಂದು ಬಜೆಟ್ನಲ್ಲಿ ಹೇಳಿದ್ದರೂ ಈಗಾಗಲೇ ಅಂಜನಾದ್ರಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ತಮ್ಮ ಬಜೆಟ್ನಲ್ಲಿ ತಲಾ ₹100 ಕೋಟಿ ಘೋಷಣೆ ಮಾಡಿವೆ. ಕಾಮಗಾರಿಗಳು ಮಾತ್ರ ₹23 ಕೋಟಿಯಷ್ಟು ಆಗಿವೆ. ಯುನಸ್ಕೊ ಹಾಗೂ ವಿಶ್ವ ಪರಂಪರೆ ತಾಣದ ನಿಯಮಗಳ ಅಡ್ಡಿಗಳಿಂದ ಉಳಿದೆಡೆ ಕೆಲಸ ಕುಂಠಿತವಾಗಿದೆ.
ಜಿಲ್ಲೆಗೆ ಪ್ರತ್ಯೇಕವಾಗಿ ಘೋಷಿಸಿರುವ ಯೋಜನೆಗಳು ಒಂದೆಡೆಯಾದರೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ಘೋಷಿಸಿರುವ ವಿಶೇಷ ₹5 ಸಾವಿರ ಕೋಟಿ ಮೊತ್ತದಲ್ಲಿಯೇ ಅಭಿವೃದ್ಧಿ ಯೋಜನೆಗಳಿಗೆ ಅನುದಾನವಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 1,668 ಅಂಗನವಾಡಿ ಕಟ್ಟಡ ನಿರ್ಮಿಸಲು ₹200 ಕೋಟಿ ಘೋಷಿಸಿದ್ದು ಇದರಲ್ಲಿ ಜಿಲ್ಲೆಗೂ ಪಾಲು ಸಿಗಲಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರೊ. ಎಂ.ಗೋವಿಂದರಾವ್ ಸಮಿತಿಯ ಶಿಫಾರಸುಗಳಿಗೆ ತಾತ್ವಿಕ ಅನುಮೋದನೆ ಕೊಟ್ಟಿರುವುದು ಅಭಿವೃದ್ಧಿಯ ವೇಗ ಹೆಚ್ಚಿಸಬಹುದು ಎನ್ನುವ ಭರವಸೆ ಮೂಡಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260307-35-1189842055

