ಸಿಂಧನೂರು:ಮಾ,07.
ತಾಯಿ ಮಕ್ಕಳ ಆರೋಗ್ಯ ಕಾಪಾಡುವ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಯೊಬ್ಬರು ನಿರ್ವಹಿಸಲು ಹಾಗೂ ಚಿಕ್ಕ ಕುಟುಂಬ ಹೊಂದುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಣಕ್ಕಾಗಿ ಹೆರಿಗೆ ನಂತರ ಎರಡನೆಯ ಮಗುವಿನ ಜನನದ ಮಧ್ಯ ಕನಿಷ್ಟ 03 ವರ್ಷಗಳ ಅಂತರವಿಡಲು ಅಂತರ ಚುಚ್ಚುಮದ್ದು ಸೇರಿದಂತೆ ಉಚಿತ ತಾತ್ಕಾಲಿಕ ವಿಧಾನಗಳ ಬಳಕೆಗೆ ದಂಪತಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬರಲು ದಡೆಸೂಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಲಕ್ಷ್ಮಿಕಾಂತಿ ತಿಳಿಸಿದರು.
ಸಾರ್ವಜನಿಜರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಯೋಜನೆ, ಸೇವೆಗಳ ಕುರಿತು ಆರೋಗ್ಯ ಶಿಕ್ಷಣವನ್ನು ಮನೆ ಬೇಟಿ ಮೂಲಕ ನೀಡುವ ದಿಶೆಯಲ್ಲಿ ಬಾಣಂತಿ, ಗರ್ಭಿಣಿಯರ ಮನೆಗಳ ಬೇಟಿ ಮಾಡಿ ಮಾತನಾಡುತ್ತಾ ಹೆರಿಗೆ ನಂತರ ಅತ್ಯಂತ ಸರಳವಾದ ಹಾಗೂ ಮೂರು ತಿಂಗಳಿಗೊಮ್ಮೆ ಒಂದು ಬಾರಿ ಇಂಜೆಕ್ಷನ್ ರೂಪದಲ್ಲಿ ಪಡೆಯುವ “ಅಂತರ” ಚುಚ್ಚುಮದ್ದು ಅತ್ಯಂತ ಸರಳ, ಸುಲಭವಾಗಿದ್ದು ದಡೆಸೂಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರಕುತ್ತದೆ. ಅಲ್ಲದೆ ಮಾಲಾ-ಎನ್, ನುಂಗುವ ಗುಳಿಗೆ, ಛಾಯಾ ಮಾತ್ರೆಗಳು ಹಾಗೂ ಐಯುಸಿಡಿ ( ವಂಕಿ ) ಅಳವಡಿಕೆಯ ಸದುಪಯೋಗ ಪಡೆಯಲು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಮಾತನಾಡಿ, ಬಾಲ್ಯವಿವಾಹ ತಡೆಗಾಗಿ ಹೆಣ್ಣು ಮಕ್ಕಳಿಗೆ 18 ವರ್ಷಗಳು ತುಂಬಿದ ನಂತರ ಮದುವೆ ಮಾಡುವುದಕ್ಕೆ ಆಧ್ಯತೆ ನೀಡಬೇಕು. ಇದರಿಂದ ಗರ್ಭಿಣಿಯಾದಾಗ ಮಗುವು ಪರಿಪೂರ್ಣವಾಗಿ ಬೆಳೆಯಲು ಸಾಧ್ಯವಾಗುವುದಲ್ಲದೆ, ಸುರಕ್ಷಿತ ತಾಯ್ತನ, ಮಗುವಿನ ಲಾಲನೆ ಪಾಲನೆಗೆ ಸಹಕಾರಿಯಾಗುವುದು. ಮುಖ್ಯವಾಗಿ ಗರ್ಭಿಣಿಯೆಂದು ತಿಳಿದ ದಿನದಿಂದಲೆ ವೈದ್ಯರ ಸಲಹೆಯಂತೆ ಪ್ರತಿ ತಿಂಗಳು ತಪಾಸಣೆ ಮಾಡಿಸಬೇಕು, ಟಿಡಿ ಚುಚ್ಚುಮದ್ದು ಹಾಕಿಸಬೇಕು, ಕನಿಷ್ಟ 180 ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಸೇವಿಸಿ ದಿನನಿತ್ಯದ ಆಹಾರದಲ್ಲಿ ಕಾಯಿಪಲ್ಯೆ, ತರಕಾರಿ, ಹಸಿರು ತಪ್ಪಲು ಪಲ್ಯ, ಕಾಳುಗಳು ಸೇರಿದಂತೆ ಪೌಷ್ಟಿಕಾಹಾರ ಸೇವಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಅರೋಗ್ಯ ಸುರಕ್ಷಣಾಧಿಕಾರಿ ಸುನೀತಾ, ಔಷಧಿ ಅಧಿಕಾರಿ ಪದ್ಮಾವತಿ, ಪ್ರಯೊಗಶಾಲಾ ತಂತ್ರಜ್ಞರಾದ ಪ್ರಲ್ಹಾದ್ ರೆಡ್ಡಿ,
ವಾಣಿಶ್ರೀ, ನೀಲಮ್ಮ, ಮೆಹತಾಬ್ ಬಾನು, ಮೇಘರಾಜ್, ಆಶಾ ಕಾರ್ಯಕರ್ತೆಯರಾದ
ಶೋಭಾ, ಶಾಂಭವಿ, ಬಸಮ್ಮ ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.


