ಕವಿತಾಳ :`ಇಲ್ಲಿಯ ಪೊಲೀಸ್ ಠಾಣೆ ವ್ಯಾಪ್ತಿಗೆ 11 ಗ್ರಾಮ ಪಂಚಾಯತಿಗಳ ಒಟ್ಟು 69 ಹಳ್ಳಿಗಳು ಮತ್ತು ಕ್ಯಾಂಪ್ಗಳು ಬರುತ್ತವೆ, ಭೌಗೋಳಿಕ ವಿಸ್ತಿರ್ಣ, ಆಸ್ಪತ್ರೆ, ಶೈಕ್ಷಣಿಕ, ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ವ್ಯವಹಾರಿಕ ಕೇಂದ್ರವಾದ ಕವಿತಾಳ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು’ ಎಂದು ಅಭಿನವ ಸಿದ್ದಲಿಂಗ ಮಹಾಸ್ವಾಮಿಜೀ ಕಲ್ಮಠ ಅವರು ಆಗ್ರಹಿಸಿದರು.
ಪಟ್ಟಣದಲ್ಲಿ ಇಂದು ನಡೆದ ತಾಲ್ಲೂಕು ಹೋರಾಟ ಸಮಿತಿಯ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
`ಬೇಡಿಕೆಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಸೇರಿದಂತೆ ತೀರ್ವ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
`ತಾಲ್ಲೂಕು ಕೇಂದ್ರವಾಗಲು ಅರ್ಹತೆ ಹೊಂದಿದ ಕವಿತಾಳ ಪಟ್ಟಣದ ಬಗ್ಗೆ ಹುಂಡೇಕಾರ ಸಮಿತಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ರಾಜಕೀಯ ಇತಾಸಕ್ತಿ ಮತ್ತು ಹೋರಾಟದ ಕೊರತೆಯಿಂದ ಬೇಡಿಕೆ ಈಡೇರಿಲ್ಲ, ಇದೀಗ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಬೆಂಬಲ ಪಡೆದು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ, ಸರ್ಕಾgದ ಮುಂದಿನ ನಡೆ ಅನುಸರಿಸಿ ಹೋರಾಟದ ರೂಪುರೇಷ ಸಿದ್ದಪಡಿಸಲಾಗುವುದು’ ಎಂದು ಪ್ರತಿಭಟನಾಕಾರರು ಹೇಳಿದರು.
ಅಂಬೇಡ್ಕರ್ ವೃತ್ತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ಸಿರವಾರ ತಹಸೀಲ್ದಾರ್ ಅಶೋಕ್ ಪವಾರ್ ಅವರಿಗೆ ಮುಖ್ಯ ಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕವಿತಾಳ ಚರ್ಚಿನ ಫಾದರ್ ಆರೋಗ್ಯಪ್ಪ, ಕರಿಯಪ್ಪ ಪೂಜಾರಿ, ಜಿಲ್ಲಾ ಪಂಚಾಯಿ ಮಾಜಿ ಸದಸ್ಯ ಕಿರಿಲಿಂಗ್ಪಪ್ಪ ಮುಖಂಡರಾದ ಬಸಪ್ಪ ಕಂದಗಲ್, ಕರೀಂಸಾಬ್, ಗಂಗ್ಪಪ ದಿನ್ನಿ, ಯಮನಪ್ಪ ದಿನ್ನಿ, ನಿಂಗಪ್ಪ ತೊಳ, ಬಲವಂತ್ರಾಯಗೌಡ, ಮಲ್ಲಿಕಾರ್ಜುನಗೌಡ, ಶಿವಣ್ಣ ವಕೀಲ, ಲಿಂಗಯ್ಯ ನಾಯಕ್ ಸೈದಾಪುರ, ಅಯ್ಯಪ್ಪ ನಿಲೋಗಲ್, ಮೌನೇಶ ಹಿರೇಕುರುಬರು, ಮಲ್ಲಪ್ಪ ಬಸಾಪೂರ, ಯಾಕುಬ್, ಅರಳಪ್ಪ ತುಪ್ಪದೂರು, ಹೆಚ್. ಬಸವರಾಜ ಕವಿತಾಳ್, ಎಂ.ಡಿ.ಮಹೇಬೂಬ್, ಕರಿಯಪ್ಪ ಅಡ್ಡೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸೈದಾಪುರ, ಹುಸೇನಪುರ, ವಟಗಲ್, ಗುಡದಿನ್ನಿ ಸೇರಿದಂತೆ ಇನ್ನಿತರ ಗ್ರಾಮಗಳ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

