ಮಸ್ಕಿ: ತಾಲೂಕಿನ ಆನಂದಗಲ್ ಗ್ರಾಮಸ್ಥರಿಗೆ ಶವ ಸಂಸ್ಕಾರಕ್ಕೆ ತಾಲೂಕಾಡಳಿತದಿಂದ ಇತ್ತೀಚೆಗೆ ಜಾಗವನ್ನು ಗುರುತಿಸಿದ್ದರು. ಆದರೆ ಜಮೀನಿನ ಮಾಲೀಕರು ಶವ ಸಂಸ್ಕಾರ ಮಾಡದಂತೆ ತಡೆಯಾಜ್ಞಾನೆ ತಂದಿದ್ದು, ಅದೇ ಜಾಗದಲ್ಲಿ ಯಥಾಸ್ಥಿತಿಯಲ್ಲೇ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ತಹಸೀಲ್ದಾರ್ ಮಂಜುನಾಥ ಭೋಗಾವತಿ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.
ಆನಂದಗಲ್ ಗ್ರಾಮದ ಸರ್ವೆ ನಂ.7ರಲ್ಲಿ 1.5 (ಒಂದೂವರೆ) ಗುಂಟೆ ಸ್ಮಶಾನ ಜಾಗಕ್ಕೆ ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಸ್ಮಶಾನ ಸ್ಥಳವನ್ನು ಗುರುತಿಸಿ ತಂತಿ ಬೇಲಿಯನ್ನು ಅಳವಡಿಸಿದ್ದರು. ಸದರಿ ಜಮೀನಿನ ಪಟ್ಟಾದಾರರಾದವರು ಏಕಾ-ಏಕಿಯಾಗಿ ಸಹಾಯಕ ಆಯುಕ್ತರವರಿಂದ ತಡೆಯಾಜ್ಞೆಯನ್ನು ತಂದು ಶವ ಸಂಸ್ಕಾರ ಮಾಡದಂತೆ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಸ್ಮಶಾನ ಜಾಗವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸದಂತೆ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

