ರಾಯಚೂರು ಫೆಬ್ರವರಿ 26 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸೂತಿ ಆರೈಕೆ ಸೇವೆಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಕರ್ನಾಟಕ ಸರಕಾರದ ದೂರ ದೃಷ್ಟಿಯನ್ನು ಹೊಂದಿದ ಹಿನ್ನಲೆ ಹಾಗೂ ಮಹತ್ವಾಕಾಂಕ್ಷಿ ಸಂಪೂರ್ಣತಾ ಯೋಜನೆಯಡಿ ಜಿಲ್ಲೆಯು ಇರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ತಾಯಿ ಮಕ್ಕಳ ಸುರಕ್ಷತೆಗಾಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಅವರು ಖುದ್ದು ಒತ್ತಾಸೆ ಹಾಗೂ ಮುತವರ್ಜಿ ವಹಿಸಿ ಜಿಲ್ಲೆಯ ದೇವದುರ್ಗ ತಾಲೂಕಿಗೆ ಸೇವಾ ನಿರತ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದ ಇಬ್ಬರೂ ಪ್ರಸೂತಿ ತಜ್ಞರನ್ನು ನೇಮಕ ಮಾಡಿಸುವ ಮೂಲಕ ದೇವದುರ್ಗ ತಾಲೂಕಿನ ಗ್ರಾಮೀಣ ಭಾಗದ ಜನತೆಯು ಹೆರಿಗೆಗಾಗಿ ರಾಯಚೂರಿಗೆ ಅಲೆಯುವುದನ್ನು ನಿಲ್ಲಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸುರೇಂದ್ರ ಬಾಬು ಅವರು ತಿಳಿಸಿದ್ದಾರೆ.
ಸುಸಜ್ಜಿತ ಹೆರಿಗೆ ಕೊಠಡಿ, ಅತ್ಯಾಧುನಿಕ ಉಪಕರಣಗಳು, ನುರಿತ ವೈದ್ಯರುಗಳನ್ನು ಹೊಂದಿರುವ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕಡು ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಅದರಲ್ಲೂ ಹೆರಿಗೆಯೆನ್ನುವ ಮಹತ್ವಪೂರ್ಣ ಸನ್ನಿವೇಶದಲ್ಲಿ ಯಾವುದೇ ತೊಂದರೆಯಾಗದಂತೆ ಹೆರಿಗೆ ನಿರ್ವಹಿಸುವ ಜವಾಬ್ದಾರಿಯನ್ನು ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ಅಲ್ಲದೆ ತಕ್ಷಣವೇ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಜವಾಬ್ದಾರಿಯ ನಿರ್ವಹಣೆಗಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದೀತಾ ಎಮ್.ಎನ್. ಅವರು ಸ್ಥಳ ನಿಯುಕ್ತಿಗೊಂಡ ಹಿರಿಯ ತಜ್ಞವೈದ್ಯರಾದ ಡಾ.ಪುಷ್ಪಲತಾ ಹಾಗೂ ಡಾ.ರವಿಕಿರಣ್ ಅವರೊಂದಿಗೆ ಜೊತೆಗೂಡಿ ಸಂವಹನ ಕೈಗೊಂಡಿದ್ದು, ಫೆ.24ರಂದು ಪ್ರಸೂತಿ ತಜ್ಞರಾದ ಡಾ.ರವಿಕಿರಣ್ ಹಾಗೂ ತಂಡವು ಎರಡು ಶಸ್ತ್ರಚಿಕಿತ್ಸಾ ಹೆರಿಗೆಯನ್ನು ಕೈಗೊಂಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ದೇವದುರ್ಗ ತಾಲೂಕಿನ ಜನತೆ ಹೆರಿಗೆಗಾಗಿ ರಾಯಚೂರುಗೆ ಬರುವ ಸಮಯದ ಉಳಿತಾಯ ಮಾಡುವ ಹಾಗೂ ತಾಯಿ ಮಗುವಿನ ಸುರಕ್ಷತೆಗೆ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ, ಸಾರ್ವಜನಿಕರು ಇದರ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

