ಜಾಲಹಳ್ಳಿ : ಫೆ 25 ದೇವದುರ್ಗ ತಾಲೂಕಿನ ಜಾಲಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವತಿಯಿಂದ ₹1 ಕೋಟಿ 25 ಲಕ್ಷ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿಗೆ ಮಾನ್ಯ ಶಾಸಕರಿಂದ ಉದ್ಘಾಟನೆ ನಡೆದಿದ್ದರೂ, ಎರಡು ವರ್ಷ ಕಳೆದರೂ ಕೆಲಸ ಸಂಪೂರ್ಣವಾಗಿಲ್ಲ ಅರ್ಧಮರ್ಧ ಕೆಲಸ ಸಂಪೂರ್ಣ ಕಳಪೆ ಎಂಬ ಆರೋಪ ಕೇಳಿಬಂದಿದೆ.

🛑 ಆರೋಪಗಳ ವಿವರ:

ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ) ಅಧ್ಯಕ್ಷರಾದ ನಂದಪ್ಪ ಅವರು ಮಾತನಾಡಿ ಕೆಳಗಿನ ಕಳಪೆ ಕಾಮಗಾರಿಯ ಅಂಶಗಳನ್ನು ಬಹಿರಂಗಪಡಿಸಿದರು:

1️⃣ ಕುಡಿಯುವ ನೀರಿನ ಟ್ಯಾಂಕ್ (₹25 ಲಕ್ಷ) – ಹೊಸ ಟ್ಯಾಂಕ್ ನಿರ್ಮಾಣ ಬದಲು ಹಳೆಯ ಟ್ಯಾಂಕ್‌ಗೆ ಬಣ್ಣ ಹಚ್ಚಲಾಗಿದೆ ಎಂದು ಆರೋಪ.
2️⃣ ಸೆಪ್ಟಿಕ್ ಟ್ಯಾಂಕ್ (₹10.50 ಲಕ್ಷ) – ಕಳಪೆ ಕಾಮಗಾರಿ.
3️⃣ ಸೇತುವೆ ನಿರ್ಮಾಣ (₹5.6 ಲಕ್ಷ) – ಅಂಕುಡೊಂಕಿನಿಂದ ನಿರ್ಮಿಸಿ ಕಳಪೆ ಮಟ್ಟದಲ್ಲಿ ಇದೆ.
4️⃣ ಬಾಗಿಲು-ಕಿಟಕಿ-ವೆಂಟಿಲೇಟರ್ (₹50 ಲಕ್ಷ) – ಕಳಪೆ ಗುಣಮಟ್ಟ, ಈಗಾಗಲೇ ಹಾನಿಯಾಗಿದೆ.
5️⃣ ವಿದ್ಯುತ್ ಕಾಮಗಾರಿ (₹26.80 ಲಕ್ಷ) – ಟಿಸಿ ಶಿಫ್ಟ್ ಮಾಡದೆ ಹಳೆಯದ್ದೇ ಬಿಟ್ಟಿದ್ದಾರೆ ಎಂಬ ಆರೋಪ.
6️⃣ ಪೈಪ್‌ಲೈನ್ ಮತ್ತು ಸ್ಯಾನಿಟೈಸರ್ (₹7.50 ಲಕ್ಷ) – ಇದುವರೆಗೆ ಯಾವುದೇ ಕೆಲಸ ನಡೆದಿಲ್ಲ.

ಈ ಕುರಿತು ಈಗಾಗಲೇ 19-09-2025 ರಂದು KRIDL ರಾಯಚೂರು ಸಹಾಯಕ ಕಾರ್ಯಪಾಲಕ ಕಚೇರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
AEE ಹನುಮಯ್ಯ ಹಾಗೂ ಜಿಲ್ಲಾ KRIDL ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಹಾಗೂ ಕಾಮಗಾರಿ ತಕ್ಷಣ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಂದಪ್ಪ ಪಿ. ಮಡ್ಡಿ, ಮುಖಂಡರಾದ ಭೀಮಣ್ಣ, ತಿಮ್ಮಣ್ಣ ಮುರಾಳ ಹಾಗೂ ಬಸವರಾಜ್ ಸೇರಿದಂತೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಜರಿದ್ದರು.

👨‍👩‍👧‍👦 ಪಾಲಕರ ಆಕ್ರೋಶ

ಪಾಲಕರಾದ ಚಂದಪ್ಪ ಬುದ್ದಿನ್ನಿ ಮಾತನಾಡಿ:

“₹25 ಲಕ್ಷ ಕುಡಿಯುವ ನೀರಿನ ಟ್ಯಾಂಕ್ ಹೆಸರಿನಲ್ಲಿ ಹಳೆಯ ಟ್ಯಾಂಕ್‌ಗೆ ಬಣ್ಣ ಹೊಡೆದು ಹಣ ದುರುಪಯೋಗ ಮಾಡಲಾಗಿದೆ. ಹೊಸ ಟಿಸಿ ಅಳವಡಿಸದೇ ಕೆಲಸ ಅರ್ಧಮಧ್ಯದಲ್ಲಿ ಬಿಟ್ಟಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಮಟ್ಟದ ಅಧಿಕಾರಿಗಳ ಎಷ್ಟೊಂದು ನಿರ್ಲಕ್ಷ ಇದೆ ಅಂದರೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೊಳ್ಳೆಗಳ ಕಾಟ ನೋಡಲಾರದೆ ಎಲ್ಲ ಪಾಲಕರು ಸೇರಿ 17000 ರೂಪಾಯಿಯ ಸೊಳ್ಳೆ ನಾಶಕ ಯಂತ್ರವನ್ನು ಪಾಲಕರು ಎಲ್ಲರೂ ಸೇರಿ ದೇಣಿಗೆ ರೂಪದಲ್ಲಿ ಕೊಟ್ಟಿರುತ್ತಾರೆ ಎಂದು ಹೇಳಿದರು
🎓 ವಿದ್ಯಾಭ್ಯಾಸದಲ್ಲಿ ಮುಂಚೂಣಿ – ಸೌಕರ್ಯಗಳಲ್ಲಿ ಹಿಂದುಳಿದ ಶಾಲೆ

ಜಿಲ್ಲೆಯಲ್ಲಿ 10ನೇ ತರಗತಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುವ ಈ ಶಾಲೆಯಲ್ಲಿ ಪ್ರತಿ ವರ್ಷ 50 ವಿದ್ಯಾರ್ಥಿಗಳಲ್ಲಿ ಕನಿಷ್ಠ 5 ವಿದ್ಯಾರ್ಥಿಗಳು ರಾಜ್ಯ ರ‍್ಯಾಂಕ್ ಗಳಿಸುತ್ತಿದ್ದಾರೆ ಎಂದು ಪ್ರಾಂಶುಪಾಲರಾದ ಸೋಮಶೇಖರ್ ಗೌಡ ತಿಳಿಸಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಗಂಭೀರವಾಗಿದೆ ಎಂದರು.

🔹 ಸೂಕ್ತ ಕಾಂಪೌಂಡ್ ನಿರ್ಮಾಣ ಅಗತ್ಯ
🔹 ದೊಡ್ಡ ಭೋಜನಾಲಯ ನಿರ್ಮಾಣ ಅಗತ್ಯ

ವಾರ್ಡನ್ ಅಂಬರೀಶ್ ಹಾಗೂ ಶಿಕ್ಷಕ ವೃಂದದವರು ಕೂಡ ಭೋಜನಾಲಯದ ಅಗತ್ಯತೆಯನ್ನು ಒತ್ತಿಹೇಳಿದರು. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಈ ವೇಳೆ ಹಾಜರಿದ್ದರು.

⚠️ ಒತ್ತಾಯ

ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣ ಎಚ್ಚೆತ್ತು, ಕಳಪೆ ಕಾಮಗಾರಿಗೆ ಸಂಬಂಧಪಟ್ಟಂತೆ ಸಮಗ್ರ ತನಿಖೆ ನಡೆಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ ದೇವದುರ್ಗ ಪದಾಧಿಕಾರಿಗಳು ಹಾಗೂ ಪಾಲಕರು ಒತ್ತಾಯಿಸಿದ್ದಾರೆ.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ

Leave a Reply

Your email address will not be published. Required fields are marked *