ರಾಯಚೂರು : ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರಿಗೆ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಶನಿವಾರ ಮಾಜಿ ಯೋಧರು ಗೌರವ ನಮನ ಸಲ್ಲಿಸಿದರು.ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಏಳನೇ ವರ್ಷದ ಗೌರವ ಸಮರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಮಾಜಿ ಯೋಧರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳನ್ನು ಹಿಡಿದು ನಗರದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೂ ಪಾದಯಾತ್ರೆ ಮಾಡುವ ಮೂಲಕ ಅವರ ತ್ಯಾಗ-ಬಲಿದಾನ ಸ್ಮರಿಸಿದರು.

‘ಜೈ ಜವಾನ್, ಜೈ ಕಿಸಾನ್’, ‘ಭಾರತ್ ಮಾತಾಕಿ ಜೈ’, ‘ವಂದೇ ಮಾತರಂ’, ‘ವೀರ ಯೋಧರು ಅಮರರಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಫೆ.14ರಂದು ನಾವು ಇಲ್ಲಿ ಸೇರಿ ಹುತಾತ್ಮ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಹೃದಯಾಂತರಾಳದಿಂದ ಸ್ಮರಿಸುತ್ತೇವೆ’ ಎಂದು ಹೇಳಿದರು.

‘ಯೋಧರ ತ್ಯಾಗ-ಬಲಿದಾನ, ಹೋರಾಟ ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದ್ದು, ನಿತ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

‘ಹುತಾತ್ಮರಾಗುವುದು ಎಂದರೆ ಕೇವಲ ಸಾವಲ್ಲ; ಅದು ಬದ್ಧತೆ ಮತ್ತು ದೇಶ ಸೇವೆಗಾಗಿ ಪ್ರಾಣಾರ್ಪಣೆ ಮಾಡಿದವರ ತ್ಯಾಗದ ಕತೆ. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿರುವ ಎಲ್ಲರೂ ಯೋಧರ ಧೈರ್ಯ, ನಿಷ್ಠೆ ಮತ್ತು ಹೋರಾಟವನ್ನು ಸದಾ ಸ್ಮರಿಸಬೇಕು. ಪ್ರತಿಯೊಬ್ಬ ನಾಗರಿಕನೂ ಯೋಧರ ಬಲಿದಾನ ಮರೆಯಬಾರದು’ ಎಂದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಮಾತನಾಡಿ, ‘ನಮ್ಮೆಲ್ಲರಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದವರನ್ನು ನಾವು ಸದಾ ಸ್ಮರಿಸುತ್ತೇವೆ. ಹುತಾತ್ಮರಾದ ನಮ್ಮ ಸಹೋದ್ಯೋಗಿಗಳ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಹೇಳಿದರು.

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಎಸ್. ಮಲ್ಲಯ್ಯ, ಬಸವರಾಜ ನಾಯಕ, ಸಲೀಂ ಹುಸೇನ್, ರಶೀದ್ ಬೇಗ್, ಶರಣಬಸವ, ಅಲಿ ಮಲಬಾರ್, ಹನುಮಂತ ನಸಲಾಪುರ್, ಜಂಗ್ಲಪ್ಪ, ಓಬಳೇಶ್, ಸೈಯದ್ ಅಹ್ಮದ್, ತಿಪ್ಪಣ್ಣ, ರಂಗನಗೌಡ, ನರಸಿಂಹಲು, ಆರ್.ತಿಮ್ಮಯ್ಯ, ಅಬ್ದುಲ್ ಖಾದರ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *