ಮಸ್ಕಿ : ಇತಿಹಾಸವೆಂದೊಡನೆ ನಮ್ಮ ಅಕ್ಷಿಪಟಲದ ಮೇಲೆ ಸ್ಮೃತಿಪಟಲದ ಹಿಂದೆ ರಾಜ ಮಹಾರಾಜರ ಶೌರ್ಯ,ಸಾಹಸ,ಸಿಂಹದಂತೆ ಘರ್ಜಿಸುತ್ತಿದ್ದರೂ ಕಲಾಪ್ರೌಡಿಮೆಗೆ ಕರಗುವ ಮೃದುವಾದ ಮನಸ್ಸು ,ಪ್ರೀತಿಗಾಗಿ ಬೆಲೆಕಟ್ಟಲಾಗದ ಭವ್ಯ ಮಹಲುಗಳ ಅರ್ಪಣೆ,ಕಲೆಗಾಗಿ ಕಲೆಯನ್ನು ಬೆಳೆಸಿದ ಅವರ ಹೃದಯಶ್ರೀಮಂತಿಕೆ ಗೋಚರವಾಗುತ್ತದೆ ಅಲ್ಲವೇ?
ಹೌದು ಇದು ಅಕ್ಷರಶಃ ಸತ್ಯ.ಅವರು ಅಂದು ರಕ್ತ,ಬೆವರು,ಹಣದ ಹೊಳೆಯನ್ನೇ ಹರಿಸಿ ನಿರ್ಮಿಸಿದ ನೂರಾರು ಸ್ಮಾರಕಗಳನ್ನು ಇಂದು ನಮ್ಮಿಂದ ರಕ್ಷಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂಬುದೊಂದೇ ಅಳಲು.
ಇಂತಹ ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ಪುರಾತನ ಕಾಲದಲ್ಲಿ ಎಡೆದೊರೆ 2000 ನಾಡಿನ ಮೊರಟ 300 ವಿಭಾಗದ(ಈಗಿನ ಸಿರಿವಾರ ತಾಲೂಕಿನ ಮಲ್ಲಟ ಗ್ರಾಮ ) ಬಳಗಾನೂರು ಗ್ರಾಮದ ಬ್ರಾಹ್ಮಣರಿಗೆ ದತ್ತಿ ನೀಡಲಾದ ಸರ್ವನಮಸ್ಯದ ಅಗ್ರಹಾರ ವಾಗಿದ್ದ ಪಿರಿಯ ಬಳೆಗಾರನೂರೆಂದೇ ಪ್ರಚಲಿತದಲ್ಲಿತ್ತು.
ಈ ಊರು ನಂತರದ ದಿನಗಳಲ್ಲಿ ರಾಯಚೂರು ದೋಆಬ್ ಪ್ರದೇಶಕ್ಕೆ ಸೇರಿತು.ಬಳಗಾನೂರು ಗ್ರಾಮವನ್ನು ಕಲ್ಯಾಣ ಚಾಲುಕ್ಯರು,
ಕಲಚೂರಿಯರು,ಸೇವುಣರು,ವಿಜಯನಗರದ ಅರಸರು,ಬಹುಮನಿ ಸುಲ್ತಾನರ ರಾಜರುಗಳ ಆಡಳಿತಕ್ಕೊಳಪಟ್ಟಿದ್ದ 22 ಅಗ್ರಹಾರಗಳಲ್ಲಿ ಒಂದಾಗಿತ್ತು.
ಬಳಗಾನೂರು ಕಳಚೂರಿಯರ ಮನೆತನದ ರಾಯಮುರಾರಿ ಸೋವಿದೇವನ ಆಳ್ವಿಕೆಯಲ್ಲಿ ಒಳಪಟ್ಟ ಈ ಬಳಗಾನೂರು ಅಂದು ಸಕಲ ಸಿರಿ ಸಂಪತ್ತಿನಿಂದ ರಾರಾಜಿಸುತ್ತಿದ್ದು ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ಕ್ರಿಸ್ತ ಶಕ,1175 ರಲ್ಲಿ ಕಳಚೂರಿ ಅರಸ ರಾಯಮುರಾರಿ ಸೋವಿ ದೇವನ ಆಳ್ವಿಕೆಯಲ್ಲಿ, ವಡ್ಡವ್ಯವಹಾರಿಯಾಗಿದ್ದ ಸಬ್ಬದೇವಶೆಟ್ಟಿ ಎಂಬ ವರ್ತಕ ಈ ಲಕ್ಷ್ಮಿನಾರಾಯಣ ದೇವಸ್ಥಾನವನ್ನು ಕಟ್ಟಿಸುತ್ತಾನೆ.ಇದು ವೇಸರ ಶೈಲಿಯಲ್ಲಿರುವ ಏಕಕೂಟ ವೈಷ್ಣವ ದೇವಸ್ಥಾನದ
ಗರ್ಭಗುಡಿಯಲ್ಲಿ ನಾರಾಯಣ ತನ್ನ ಎಡತೊಡೆಯ ಮೇಲೆ ಲಕ್ಷ್ಮಿಯನ್ನು ಕೂಡಿಸಿಕೊಂಡಿರುವ ಕಪ್ಪುಶಿಲೆಯ ಲಕ್ಷ್ಮಿ ನಾರಾಯಣ ದೇವರ ವಿಗ್ರಹವಿದೆ.ಇದು
ಭಾರತದಲ್ಲಿಯೇ ಎರಡನೆಯದೆನ್ನಬಹುದಾದ ಅಪರೂಪದ ದಕ್ಷಿಣಾಭಿ ಲಕ್ಷ್ಮಿನಾರಾಯಣ ದೇವಸ್ಥಾನವೆಂದು ಹೇಳಲಾಗುತ್ತಿದೆ.
ತೋಟದ ಯಲ್ಲಮ್ಮ ದೇವಸ್ಥಾನ ಜಿಲ್ಲೆಯಲ್ಲಿಯೇ ಶಿಲಾಶಾಸನ ಉಳ್ಳ ಏಕೈಕ ತೋಟದ ಯಲ್ಲಮ್ಮ ದೇವಸ್ಥಾನ ಊರ ಹೊರವಲಯದಲ್ಲಿದ್ದು ಇದರ ಮುಂಭಾಗದಲ್ಲಿ ಶಕ್ತಿ ಶಾಸನೋಕ್ತ ಗರ್ಭಗೃಹದಲ್ಲಿ ಯಲ್ಲಮ್ಮ ದೇವಿಯ ಮೂರ್ತಿಯಿದೆ ಹಾಗೂ12 ನೇ ಶತಮಾನಕ್ಕೆ ಸೇರಿದ ನವರಂಗವಿದೆ.
ಆದಯ್ಯ ಅಮರಯ್ಯ ದೇವಸ್ಥಾನ
ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳಾಗಿವೆ.
ಮಾರುತಿ ದೇವಸ್ಥಾನ ದಕ್ಷಿಣಾಭಿಮುಖವಾಗಿದ್ದು
ವಿಶೇಷವೆಂಬಂತೆ ಮಾರುತಿದೇವರ ಕೈಯಲ್ಲಿ ತ್ರಿಶೂಲವಿರುವುದನ್ನು ಕಾಣಬಹುದು,ಅದೇ ರೀತಿ ವೀರಭದ್ರೇಶ್ವರ ದೇವಾಲಯ ಉತ್ತರಾಭಿಮುಖವಾಗಿದೆ.
ಗರ್ಭಗೃಹದಲ್ಲಿ ನಿಂತ ಭಂಗಿಯ ಕಪ್ಪು ಶಿಲೆಯ ವೀರರ್ಭದ್ರೇಶ್ವರ ವಿಗ್ರಹವಿದೆ.
ನಗರೇಶ್ವರ ದೇವಾಲಯದ ಹತ್ತಿರದಲ್ಲಿ ಕ್ರಿಸ್ತ ಶಕ 11ಮತ್ತು12 ನೇ ಶತಮಾನದ ಎರಡು ತೃಟಿತ ಜೈನ ತೀರ್ಥಂಕರರ ವಿಗ್ರಹಗಳು, ತೃಟಿತ ಶಾಸನೋಕ್ತ ಮನೋಹರ ಚನ್ನಕೇಶವ ವಿಗ್ರಹ,ನವ ಶಿಲಾಯುಗಕಾಲದ ಮಾನವರು ವಾಸಮಾಡಿದ ಬೂದಿದಿಬ್ಬ,ನಾಗಭೂಷಣ ದೇವಾಲಯ ಇದೆ.
ಐತಿಹಾಸಿಕ ಕುರುಹುಗಳಾಗಿರುವ ಮಂದಿರಗಳು ಜನರ ತಾತ್ಸಾರದಿಂದ ದನದಕೊಟ್ಟಿಗೆಗಳಾಗಿ,ತಿಪ್ಪೆಗುಂಡಿಗಳಾಗಿ ಎಣ್ಣೆ,ಸುಣ್ಣ,ಬಣ್ಣಗಳಿಂದ ವಿರೂಪಗೊಂಡು ತಿಪ್ಪೆಯಲ್ಲಿಟ್ಟ ವಜ್ರದಂತಾಗಿದೆ.
ಆದರೂ ಚಳಿ,ಗಾಳಿ,ಮಳೆಗಳಿಗೆ ಮೈಯೊಡ್ಡಿ ನಿಂತಿರುವ ಈ ದೇವಾಲಯಗಳು ಜೀರ್ಣೋದ್ದಾರವಾದೀತೆ? ಎಂದು ಕಾದುಕುಳಿತಿವೆ.ಇನ್ನೂ ಈ ಭಾಗದ ಜನ,ಜನಪ್ರತಿನಿಧಿಗಳು,ಪುರಾತತ್ವ ಇಲಾಖೆ ಸುಮ್ಮನೆ ಕುಳಿತರೆ, ಮುಂದಿನ ಪೀಳಿಗೆಗೂ ಪೂರ್ವಜರ ಕಲಾಸಿರಿ ಕಳಚೂರಿಯರ ಕೊಂಡಿ ಕಳಚಿ ಕಾಲಗರ್ಭಸೇರುವ ಮುನ್ನ ರಕ್ಷಿಸಿ ಮುಂದಿನ ಪೀಳಿಗೆಗಳಿಗೆ ಬಳುವಳಿಯಾಗಿ ಬಿಟ್ಟುಹೋಗುವ ಕಾರ್ಯ ಆಗಬೇಕಿದೆ.


