ರಾಯಚೂರು ಜನವರಿ 25 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಫೆಬ್ರವರಿ 5, ಫೆಬ್ರವರಿ 6 ಮತ್ತು ಫೆಬ್ರವರಿ 7ರಂದು ಮೂರು ದಿನಗಳ ಕಾಲ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಜನವರಿ 25ರಂದು ರಾಯಚೂರು ಸಿಟಿಯಲ್ಲಿ ಮ್ಯಾರಥಾನ್ ಓಟ ನಡೆಯಿತು.
ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಸೇರಿದಂತೆ ಬೇರೆ ಬೇರೆ ವರ್ಗದ ಜನರು ಮ್ಯಾರಾಥಾನದಲ್ಲಿ ಭಾಗಿಯಾಗಲು ಬೆಳಗಿನ ಕೊರೆವ ಚಳಿಯಲ್ಲಿಯೇ ನಗರದ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಂದು ಸೇರಿದ್ದರು.
ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಮ್ಯಾರಾಥಾನಗೆ ಹಸಿರು ಬಾವುಟ ತೋರುತ್ತಿದ್ದಂತೆ ಸ್ಪರ್ಧಾಳುಗಳು ನಾಮುಂದೆ ತಾಮುಂದೆ ಎನ್ನುವಂತೆ ಓಟ ಆರಂಭಿಸಿದರು.
ಜಿಲ್ಲಾ ಕ್ರೀಡಾಂಗಣದಿಂದ ಓಟ ಆರಂಭಿಸಿದ ಸ್ಪರ್ಧಾಳುಗಳು ಆರ್.ಟಿ.ಓ ಸರ್ಕಲ್ವರೆಗೆ ತೆರಳಿ ಅಲ್ಲಿಂದ ಮರಳಿ ಕ್ರೀಡಾಂಗಣಕ್ಕೆ ಬಂದು ಸೇರಿದರು.
ಈ ಓಟದಲ್ಲಿ ಪುರುಷರ ವಿಭಾಗದಲ್ಲಿ ಶಿವಾನಂದ ಪ್ರಥಮ ಬಹುಮಾನ, ತಾಯಪ್ಪ ನಾಯಕ ದ್ವಿತೀಯ ಬಹುಮಾನ ಮತ್ತು ಗೋವಿಂದರಾಜ್ ತೃತೀಯ ಬಹುಮಾನ ಗಿಟ್ಟಿಸಿ ಗೆಲುವಿನ ನಗೆ ಬೀರಿದರು.
ಮಹಿಳಾ ವಿಭಾಗದಲ್ಲಿ ಶಾಹೀನ್ ಎಸ್.ಡಿ. ಹುಬ್ಬಳ್ಳಿ ಪ್ರಥಮ, ಜ್ಯೋತಿ ರಾಯಚೂರು ದ್ವಿತೀಯ ಹಾಗೂ ವಿಜಯಲಕ್ಷಿ್ಮ ಅವರು ತೃತೀಯ ಬಹುಮಾನ ಪಡೆದುಕೊಂಡು ಸಂತಷ ವ್ಯಕ್ತಪಡಿಸಿದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಾಳುಗಳಿಗೆ ಇದೆ ವೇಳೆ ಕ್ರಮವಾಗಿ 15,000, 10,000 ರೂ ಹಾಗೂ 5000 ರೂ. ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಹಸೀಲ್ದಾರ್ ಸುರೇಶ್ ವರ್ಮ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರೇಶ್ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವಿಜಯ ಶಂಕರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ಸ್ಪರ್ಧೆಯ ನೋಡಲ್ ಅಧಿಕಾರಿಗಳಾದ ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ಚಂದ್ರಶೇಖರ ಹೊಸೂರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಹಿಬೂಬ್ ಸಾಬ್, ಅಥ್ಲಿಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ತಿಮ್ಮಾರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಉತ್ತಮ ಪ್ರತಿಕ್ರಿಯೆ: ರಾಯಚೂರು ಉತ್ಸವ ಅಂಗವಾಗಿ ನಡೆದ ಮ್ಯಾರಾಥಾನ್ಗೆ ರಾಯಚೂರು ಜಿಲ್ಲೆಯ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸ್ಪರ್ಧೆಗೆ ಸುಮಾರು 800ಕ್ಕೂ ಅಧಿಕ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.
ಜನವರಿ 27ರಂದು ಸೈಕ್ಲಾಥಾನ್: ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಜನವರಿ 27ರಂದು ಬೆಳಗ್ಗೆ 6 ಗಂಟೆಗೆ ಜಿಲ್ಲಾಡಳಿತದಿಂದ ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕ್ಲಾಥಾನ್ ಆಯೋಜನೆ ಮಾಡಲಾಗಿದೆ. ಪ್ರಥಮ ಬಹುಮಾನ 10 ಸಾವಿರ ಹಾಗೂ ದ್ವಿತೀಯ ಬಹುಮಾನ 5 ಸಾವಿರ ರೂ.ಗಳನ್ನು ನೀಡಲಾಗುವುದು. ಆಸಕ್ತರು ಈ ಸ್ಪರ್ಧೆಯ ನೋಡಲ್ ಅಧಿಕಾರಿಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರ ಮೊಬೈಲ್ ಸಂಖ್ಯೆ: 9972316898 ಅಥವಾ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವಿಜಯಶಂಕರ್ ಮೊಬೈಲ್ ಸಂಖ್ಯೆ: 9448427601ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ. ಅಥವಾ ಉತ್ಸವದ ವೆಬ್ ತಾಣ www.raichurutsava.com ಗೆ ಭೇಟಿ ನೀಡಿ ಅಲ್ಲಿ ಅಪ್ಲೋಡ್ ಮಾಡಲಾದ ಸೈಕ್ಲಾಥಾನದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸಹ ನೋಂದಾಯಿಸಿಕೊಳ್ಳಬಹುದಾಗಿದೆ.


