ರಾಯಚೂರು ಜಿಲ್ಲೆಯಲ್ಲಿ ಆನೆಕಾಲು ರೋಗದ ಹೊಸ ಪ್ರಕರಣಗಳ ಸಂಪೂರ್ಣ ನಿಯಂತ್ರಣಕ್ಕಾಗಿ ರೋಗ ಪತ್ತೆ ಹಚ್ಚಲು, ಆಯ್ದ ಗ್ರಾಮಗಳು, ವಲಸೆ ಪ್ರದೇಶಗಳಲ್ಲಿ ರೋಗ ಪತ್ತೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಕೀಯ ತಂಡ ರಾತ್ರಿ ವೇಳೆ ಕೈಗೊಳ್ಳುವ ರಕ್ತ ಲೇಪನ ಕಾರ್ಯಕ್ಕೆ ಸಹಕರಿಸಿ ಆನೆಕಾಲು ಮುಕ್ತ ರಾಯಚೂರು ಜಿಲ್ಲೆಯಾಗಿಸಲು ಸಾರ್ವಜನಿಕರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ವಿನಂತಿಸಿದರು.

ದೇವದುರ್ಗ ತಾಲೂಕಿನ ಗಬ್ಬೂರು ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಖಾನಾಪೂರು ಗ್ರಾಮದಲ್ಲಿ ರಾತ್ರಿ ವೇಳೆ ಹಮ್ಮಿಕೊಂಡ ರಕ್ತಲೇಪನ ಕಾರ್ಯವನ್ನು ಖುದ್ದು ಪರಿಶೀಲಿಸಿ ಜನತೆಯೊಂದಿಗೆ ಮಾತನಾಡಿ
ಸಮುದಾಯದಲ್ಲಿ ನಮ್ಮೊಂದಿಗೆ ಹಲವು ವಿಧದ ಸೊಳ್ಳೆಗಳು ಇದ್ದು ಅದರಲ್ಲಿ ಕ್ಯೂಲೆಕ್ಸ್ ಸೊಳ್ಳೆಯು, ಆನೆಕಾಲು ರೋಗ ಹೊಂದಿದ ವ್ಯಕ್ತಿಗೆ ಕಚ್ಚಿ ಅದೆ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಬರಿಗಣ್ಣಿಗೆ ಕಾಣದ ‘ವುಚೆರೇರಿಯಾ ಬ್ಯಾಂಕ್ರೋಫ್ಟಿ’ ‘ಬ್ರೂಗಿಯಾ ಮಲಾಯಿ’ ಎಂಬ ಪರಾವಲಂಬಿ ನೂಲಿನಂತಹ ಹುಳುಗಳನ್ನು ಅವರ ದೇಹಕ್ಕೆ ವರ್ಗಾಯಿಸುತ್ತವೆ.
ಈ ಹುಳುಗಳು ರಕ್ತ ಮತ್ತು ದುಗ್ಧರಸನಾಳಗಳಲ್ಲಿ ಬೆಳೆದು, ದ್ರವ ಹರಿಯದಂತೆ ತಡೆಯುತ್ತವೆ, ಇದರಿಂದ ಕೈ ಕಾಲುಗಳು ಆನೆಯ ಕಾಲಿನಂತೆ ದಪ್ಪವಾಗುವ ಮೂಲಕ ಶಾಶ್ವತವಾಗಿ ಆನೆಕಾಲು ರೋಗಕ್ಕೆ ಕಾರಣವಾಗುತ್ತಿದ್ದು, ಜೋತೆಗೆ ಒಮ್ಮೆ ಬಂದರೆ ಜೀವನ ಪರ್ಯಂತ ಕಾಡುವ ಆನೆಕಾಲು ರೋಗಿಯಾಗುವುದನ್ನು ಗುರ್ತಿಸಿ ಆರಂಭದಲ್ಲಿಯೇ ತಡೆಗಟ್ಟಲು ರಾತ್ರಿ ವೇಳೆ ಆರೋಗ್ಯ ಇಲಾಖೆಯ ಜಿಲ್ಲೆಯಲ್ಲಿ ಈಗಾಗಲೆ ಎಲ್ಲ ತಾಲುಕುಗಳ ಆಯ್ದ ಗ್ರಾಮಗಳಲ್ಲಿ, ನಗರದ ವಾರ್ಡ್‌‌ಗಳಲ್ಲಿ ರಾತ್ರಿ ವೇಳೆ ರಕ್ತ ಲೇಪನ ಕಾರ್ಯ ಕೈಗೊಳ್ಳಲಾಗುತ್ತಿದ್ದು ಜನತೆಯು ಸಹಕರಿಸಿ ಎಂದು ವಿನಂತಿಸಿದರು.

ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ ಕೆ ಮಾತನಾಡಿ, ಸಾಮಾನ್ಯವಾಗಿ ಆನೆಕಾಲು ರೋಗ ವ್ಯಕ್ತಿಯಲ್ಲಿ ಕಂಡುಬರಲು ಧಿರ್ಘಾವಧಿ ತೆಗೆದುಕೊಳ್ಳುತ್ತದೆ. ಆರಂಭದಲ್ಲಿ ಜ್ವರ ಮತ್ತು ಚಳಿ, ಚರ್ಮದ ಮೇಲೆ ಸೋಂಕು ಹಾಗೂ ಕಾಲುಗಳು, ತೋಳುಗಳು, ಸ್ತನಗಳು ಅಥವಾ ಜನನಾಂಗದ ಭಾಗಗಳಲ್ಲಿ ಊತ ಕಂಡುಬರುತ್ತದೆ.
ಕ್ರಮೇಣ ಚರ್ಮವು ದಪ್ಪವಾಗಿ, ಗಟ್ಟಿಯಾಗಿ, ಗರುಸಾಗಿ ಆನೆ ಚರ್ಮದಂತೆ ಕಾಣಿಸುವುದು. ಇದರಿಂದ ಅತಿಯಾದ ನೋವು ಮತ್ತು ನಡೆಯಲು ಕಷ್ಟವಾಗುವುದು. ಇದನ್ನು ರೋಗ ಲಕ್ಷಣಗಳನುಸಾರ ನಿರ್ವಹಣೆ ಚಿಕಿತ್ಸೆ ಮಾತ್ರ ಸಾಧ್ಯವಿದ್ದು, ಸಂಪೂರ್ಣ ಗುಣಪಡಿಸಲು ಕಷ್ಟಕರ. ಈ ಹಿನ್ನಲೆ ಮನೆಯ ಸುತ್ತಲು ಚರಂಡಿ, ತಿಪ್ಪೆಗಳ ಹತ್ತಿರ ಅನುಪಯುಕ್ತ ನೀರು ನಿಲ್ಲದಂತೆ ಹಾಗೂ ಮನೆ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವಾಗ ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಜಾಗೃತಿ ವಹಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ 105 ಜನರ ಮೇಲೆ ರಕ್ತ ಲೇಪನವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಸಿದ್ರಾಮೇಶ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತರಾಯ ಹೂಗಾರ್, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಈರಾಕ್ಷಣಿ, ಸಿಹೆಚ್‌ಓ ಹರೀಶ್‌, ಆಶಾ ಕಾರ್ಯಕರ್ತೆ ಸಾಬಮ್ಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ತಂಡದ ಮೂಲಕ ಕೈಗೊಂಡರು. ಸಾರ್ವಜನಿಕರು ಆಗಮಿಸಿ ಪರೀಕ್ಷೆಗೆ ಸಹಕರಿಸಿದರು.

Leave a Reply

Your email address will not be published. Required fields are marked *