ಸಿರವಾರ: ಪಟ್ಟಣದ ವಿದ್ಯಾ ವಾಹಿನಿ ಶಾಲೆ ಬಳಿಯ ಲಿಂಗಸುಗೂರು-ರಾಯಚೂರು ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ತಾಲೂಕು ಆಡಳಿತ ವರ್ಗವೇ ಕಸವನ್ನು ಸುಡುತ್ತಿರುವುದು ಸ್ಥಳೀಯರು ಮತ್ತು ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆಗೆ ಕಾರಣಗಿದೆ.
ಕಸಕ್ಕೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು ಅರ್ಧ ಕಿ.ಮೀ ವರೆಗೆ ದಟ್ಟ ಹೊಗೆಯಿಂದ ರಸ್ತೆ ಆವೃತವಾಗಿದೆ ಇದರಿಂದ ವಾಹನ ಸಂಚಾರಕ್ಕೆ ಭಾರೀ ಅಡಚಣೆಯಾಗುತ್ತಿದೆ. ಬಸ್, ಲಾರಿ, ಕಾರು, ಬೈಕ್ ಸವಾರರು ಲೈಟ್ ಹಾಕಿಕೊಂಡು, ಹಾರ್ನ್ ಮಾಡುತ್ತಾ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ ಎಂದು ಸ್ಥಳೀಯರು ದೂರಿದರು.
ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವ ಜನರು ಮತ್ತು ಅಂಗಡಿ ಮಾಲೀಕರು ದಟ್ಟ ಹೊಗೆಯಿಂದ ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಗೆ ಆವರಿಸಿರುವುದರಿಂದ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಕೂಡಲೇ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ ) ತಾಲೂಕಾಧ್ಯಕ್ಷ ರಾಘವೇಂದ್ರ ಖಾಜನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

