ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ನ್ಯಾಯಾಲಯ ಆದೇಶಿಸಿದರೂ ಪರಿಹಾರ ನೀಡದ ಕೆಕೆಆರ್ ಟಿಸಿ ಬಸ್ ಅನ್ನು ಪಟ್ಟಣದ ಬಸ್ ನಿಲ್ದಾಣದಲ್ಲಿ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದರು. 2001ರಲ್ಲಿ ಮಸ್ಕಿ ಪಾಂಡುರಂಗ ಕ್ಯಾಂಪ್ ಬಳಿ ಯಾದಗಿರಿ ಕಲ್ಯಾಣ ಸಾರಿಗೆ ಘಟಕಕ್ಕೆ ಸೇರಿದ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಉಮೇಶ ಎನ್ನುವವರು ಸಾವಿಗೀಡಾಗಿದ್ದರು. ಪರಿಹಾರಕ್ಕಾಗಿ ಕುಟುಂಬದವರು ಲಿಂಗಸಗೂರು ಜೆ ಎಂ ಎಫ್ ಸಿ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಜೆ ಎಂ ಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶರು 66,99,675 ರೂ. ಪರಿಹಾರ ಮೊತ್ತ, 8,37,450 ರೂ. ಬಡ್ಡಿ, 7525 ರೂ. ಇತರೆ ವೆಚ್ಚ ಸೇರಿ 75,44,650 ರೂ. ನೀಡಬೇಕೆಂದು ಸೂಚಿಸಿದ್ದರು. ಆದರೆ, ಕೆಕೆಆರ್ಟಿಸಿ ವಿಳಂಬ ಮಾಡಿದ್ದರಿಂದ ನ್ಯಾಯಾಲಯವು ಬಸ್ ಜಪ್ತಿ ವಾರೆಂಟ್ ಹೊರಡಿಸಿತ್ತು. ಹೀಗಾಗಿ
ಕೋರ್ಟ್ ಬೇಲಿಫ್ ಮಾನಪ್ಪ. ಬಿ ಲಿಂಗಸಗೂರು ಬಸ್ ನಿಲ್ದಾಣಕ್ಕೆ ಬಂದು ಯಾದಗಿರಿ ಘಟಕದ (ಕೆಎ 33 ಎಫ್ 0638) ಬಸ್ ವಶಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಕೆಕೆಆರ್ ಟಿಸಿ ಯಾದಗಿರಿ ಘಟಕದ ಬಸ್ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದರು. ನಂತರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವೃತನ ಕುಟುಂಬಕ್ಕೆ 10.84 ಲಕ್ಷ ಪರಿಹಾರದ ಚೆಕ್ ಮೂಲಕ ಪಾವತಿ ಮಾಡಿದ್ದರಿಂದ ಜಪ್ತಿ ಮಾಡಿದ ಸಾರಿಗೆ ಬಸ್ ಬಿಡುಗಡೆ ಮಾಡಲಾಯಿತು . ಈ ಸಂದರ್ಭದಲ್ಲಿ ವಕೀಲರಾದ ಎಚ್.ವೀರಭದ್ರಪ್ಪ, ಶಿವಕುಮಾರ ಶೀಲವಂತ ನವರ, ಮಲ್ಲಿಕಾರ್ಜುನ ಗೋನಾಳ, ಶಿವಕುಮಾರ , ಚಾಲಕ ಪ್ರಕಾಶ್ ಇದ್ದರು .

