ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಸತ್ಯನಾರಾಯಣ ಶೆಟ್ಟಿ ನೇಮಕ
ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧಿನಿಯಮ, 2005ರ ಪ್ರಾವಧಾನಗಳ ಅನ್ವಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿಯಮಗಳು, 2010ರ ನಿಯಮ 3 ಮತ್ತು ಕರ್ನಾಟಕ ನಿಯಮಗಳು, 2025ರ ತಿದ್ದುಪಡಿ ನಿಯಮಗಳ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸತ್ಯನಾರಾಯಣ ಶೆಟ್ಟಿ (ಸಿಂಧನೂರು, ರಾಯಚೂರು ಜಿಲ್ಲೆ), ಜಗನ್ನಾಥ ಹಲಮಡಗಿ (ಹುಮನಾಬಾದ್, ಬೀದರ್ ಜಿಲ್ಲೆ) ಹಾಗೂ ವೆಂಕಟೇಶ್ (ಮಂಡ್ಯ ಜಿಲ್ಲೆ) ಅವರನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ–3 ಗಂಗಾದೇವಿ ಹೆಚ್.ಸಿ. ಆದೇಶ ಹೊರಡಿಸಿದ್ದಾರೆ.
ಮಕ್ಕಳ ಹಕ್ಕುಗಳ ಸಂರಕ್ಷಣೆ, ಕಲ್ಯಾಣ, ಶಿಕ್ಷಣ, ಸುರಕ್ಷತೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ನೂತನ ಸದಸ್ಯರು ತಮ್ಮ ಅನುಭವ ಮತ್ತು ಸೇವಾ ಮನೋಭಾವದ ಮೂಲಕ ಮಹತ್ವದ ಕೊಡುಗೆ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಅವರು ತಮ್ಮ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಮಕ್ಕಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ರಾಜ್ಯದ ಮಕ್ಕಳಿಗೆ ನ್ಯಾಯ, ರಕ್ಷಣೆ ಹಾಗೂ ಸಬಲೀಕರಣ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಆಶಿಸಲಾಗಿದೆ. ನೂತನವಾಗಿ ನೇಮಕಗೊಂಡ ಸದಸ್ಯರಿಗೆ ವಿವಿಧ ವಲಯಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
