ಮಸ್ಕಿ: ನೂತನ ಭ್ರಮರಾಂಭ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವಂತೆ ಶಾಸಕ ಆರ್. ಬಸನಗೌಡ ತುರವಿಹಾಳ ಅವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ಬುಧವಾರ ಮನವಿ ಸಲ್ಲಿಸಿದೆ.
ಲಿಂಗಸುಗೂರು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಬೇರ್ಪಟ್ಟು ಸ್ವತಂತ್ರ ಮಾರುಕಟ್ಟೆಯಾಗಿ ಕಾರ್ಯಾರಂಭಿಸಿರುವ ಭ್ರಮರಾಂಭ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವು ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ಅವುಗಳನ್ನು ತುರ್ತಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಾರುಕಟ್ಟೆ ಆವರಣದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಬಾಕಿ ಉಳಿದ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಮುಖ್ಯ ದ್ವಾರಬಾಗಿಲು (ಗೇಟ್ಗಳು) ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಸಿದ್ದನಗೌಡ ಮಾಟೂರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿಂಗಯ್ಯ ಮಲ್ಲದಗುಡ್ಡ, ಪಂಪಣ್ಣ, ಅಮರೇಗೌಡ ಹಾಲಾಪೂರ, ಕುಸುಮ ಬಲವಂತರಾಯ, ಮೌನಪ್ಪ ಹಂಪನಾಳ, ಪೂರ್ಣಿಮಾ ವಿರೇಶ ಪಾಟೀಲ್, ಹಿರೇ ಮೌಲಸಾಬ, ದುರಗಪ್ಪ ಹಡಗಲಿ, ಮಲ್ಲರಡ್ಡೆಪ್ಪ, ಅಮರೇಶ ಗೋನವಾರ, ಸಂಗಣ್ಣ ಯಲಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

