ಸಾಕಿದ ಅಥವಾ ಬೀದಿ ನಾಯಿ ಕಚ್ಚಿದರೆ, ಉಗುರಿನಿಂದ ಗಿರಿದರೆ ಅಥವಾ ಮೈ ಮೇಲಿರುವ ಗಾಯವನ್ಮು ನಾಲಿಗೆಯಿಂದ ನೆಕ್ಕಿದರೆ ಏನೂ ಆಗುವುದಿಲ್ಲವೆಂದು ನಿರ್ಲಕ್ಷಿಸಬೇಡಿ ಎಂದು ಮತ್ತು
ಆಕಸ್ಮಿಕವಾಗಿ ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಗಾಬರಿಗೊಳಿಸದೆ ತಕ್ಷಣ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಜಿಲ್ಲೆಯ ತಾಲೂಕಾ ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಏರ್ಪಡಿಸಿದ ಸಭೆಯಲ್ಲಿ ಮಾತನಾಡುತ್ತಾ, ಈ ಎರಡು ಪ್ರಾಣಿಗಳ ಕಡಿತವನ್ನು ನಿರ್ಲಕ್ಷಿಸಿದರೆ ಮಾರಣಾಂತಿಕ ವಾಗಬಹುದಾದ್ದು, ಇದಕ್ಕಾಗಿ ನಾಟಿ ವೈದ್ಯರ ಬಳಿ ತೆರಳದೆ ಹತ್ತಿರದ ಸರಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯಲು ಜನತೆ ವ್ಯಾಪಕ ಜಾಗೃತಿ ನೀಡಲು ಸೂಚಿಸಿದರು.
ಹಾವು ಕಚ್ಚಿದಾಗ ವಹಿಸಬೇಕಾದ ಜಾಗೃತಿ.
ಹಾವು ಕಚ್ಚಿದ ವ್ಯಕ್ತಿಯನ್ನು ಗಾಬರಿಯಾಗದಂತೆ ಶಾಂತವಾಗಿ ವರ್ತಿಸಿ ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಕರೆದುಕೊಂಡು ಬಂದು ಚುಚ್ಚುಮದ್ದು ಕೊಡಿಸಿ ಜೀವ ಹಾನಿಯಾಗದಂತೆ ಮಾಡಬೇಕು.
ವಾಡಿಕೆಯಲ್ಲಿ ಹಾವು ಕಚ್ಚಿದಾಗ ಗಾಬರಿಯಾಗುವುದು ಸಾಮಾನ್ಯವಾಗಿದ್ದು ಇದರಿಂದ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ವಿಷಕಾರಿ ಹಾವು ಕಡಿತದ ಸಂದರ್ಭದಲ್ಲಿ ವ್ಯಕ್ತಿಯನ್ನು ಯಾವುದೇ ವಾಹನ ಅಥವಾ 108 ಅಂಬುಲೇನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮೊದಲ ಆದ್ಯತೆ ನೀಡಬೇಕು. ಈ ಅವಧಿಯಲ್ಲಿ ರೋಗಿಯನ್ನು ಕೂರಿಸಿ ಹಾವು ಕಚ್ಚಿರುವ ಭಾಗ ಹೃದಯದ ಕೆಳಗೆ ಬರುವ ಹಾಗೆ ಇರಲಿ ರಕ್ತಪರಿಚಲನೆಗೆ ತಡೆಯಾಗುವಂತಹ ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆಯಬೇಕು. ಕಚ್ಚಿದ ಭಾಗವು ಅಲುಗಾಡದಂತೆ ನೋಡಿಕೊಳ್ಳಿ ಮುಖ್ಯವಾಗಿ ಆಸ್ಪತ್ರೆಗೆ ಹೋಗುವಾಗ ವ್ಯಕ್ತಿಯ ರೋಗ ಲಕ್ಷಣಗಳಾದ ತೇಲುಗಣ್ಣು, ಕಣ್ಣುಮುಚ್ಚುವುದು, ನಾಲಿಗೆ ತೊದಲುವಿಕೆ, ನುಂಗಲು ಕಷ್ಟವಾಗುವುದು, ಉಸಿರಾಡಲು ಕಷ್ಟವಾಗಬಹುದು ಮುಂತಾದವುಗಳನ್ನು ಗಮನಿಸಿ. ಈ ರೀತಿಯಾದಲ್ಲಿ ನರಮಂಡಲಕ್ಕೆ ಹಾನಿ ಮಾಡುವ ವಿಷದ ಅಂಶವಾಗಿರುತ್ತದೆ. ಹಾಗೆಯೇ ಗಾಯದ ಜಾಗದಲ್ಲಿ ತೀವ್ರ ಉರಿ, ನೋವುಹರಡುವಿಕೆ ಅಥವಾ ಊದುವಿಕೆ ಗಾಯದ ಸುತ್ತ ಬಣ್ಣಹೀನವಾಗುವುದು, ಕೆಳಬೆನ್ನಿನಲ್ಲಿ ನೋವು ಮುಂತಾದ ಲಕ್ಷಣಗಳು ಅಂಗಾಂಗಕ್ಕೆ ಹಾನಿ ಮಾಡುವ ವಿಷದ ಅಂಶವಾಗಿರುತ್ತದೆ. ದಯವಿಟ್ಟು ಈ ಲಕ್ಷಣಗಳ ಬಗ್ಗೆ ಹೆಚ್ಚು ಮಾಹಿತಿ ನೀಡಬೇಕು.
ನಾಯಿ ಕಡಿತ ಕುರಿತು ಜಾಗೃತಿ
ನಾಯಿ ಕಡಿತದಲ್ಲಿ ವಿಶೇಷವಾಗಿ
ರೇಬೀಸ್ ಸೋಂಕುವುಳ್ಳ ನಾಯಿ ಕಚ್ಚುವಿಕೆಯಿಂದ ವ್ಯಕ್ತಿಗೆ ರೇಬೀಸ್ ಕಾಯಲೆ ಬಂದಾಗ ಕ್ರಮೇಣ ನೀರು ಕುಡಿಯುವುದಿಲ್ಲ, ಗಾಳಿ ಬಿಸಿದರೆ ಹೆದರುತ್ತಾರೆ, ಬೆಳಕು ಕಂಡರೆ ಭಯ ಪಡುತ್ತಾರೆ, ರೋಗ ದೀರ್ಘವಾದಾಗ ಮರಣ ಸಂಭವಿಸಬಹುದು. ಅಲ್ಲದೆ ನಾಯಿ ಕಡಿತ ಮೆದುಳಿಗೆ ( ತಲೆಗೆ ) ಹತ್ತಿರವಾಗಿದ್ದಲ್ಲಿ ಅಪಾಯ ಹೆಚ್ಚು. ಸಾಕಿದ ಅಥವಾ ಬೀದಿ ನಾಯಿ ಕಚ್ಚಿದರೆ, ಉಗುರಿನಿಂದ ಗಿರಿದರೆ, ಅಥವಾ ನಮ್ಮ ಮೈ ಮೇಲಿರುವ ಈಗಾಗಲೆ ಇರುವ ಗಾಯವನ್ಮು ನಾಲಿಗೆಯಿಂದ ನೆಕ್ಕಿದರೆ ಏನೂ ಆಗುವುದಿಲ್ಲವೆಂದು ನಿರ್ಲಕ್ಷ್ಯದರೆ ಅಪಾಯ ಹೆಚ್ಚು. ಈ ರೀತಿ ಮಾಡದೆ ನಾಯಿ ಕಚ್ಚಿದ ಜಾಗವನ್ನು ಸೋಪು ಮತ್ತು ನೀರಿನಿಂದ ತೊಳೆದು ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ಮಾರಣಾಂತಿಕವಾದ ರೇಬಿಸ್ ರೋಗ ತಡೆಗಟ್ಟುವ ಇಂಜಕ್ಷನ್ ಪಡೆಯಲು ತಿಳಿಸಬೇಕಿದೆ. ಮಾರಣಾಂತಿಕ ರೇಬೀಸ್ ಕಾಯಿಲೆಯನ್ನು ತಡೆಗಟ್ಟಬಹುದಾಗಿದ್ದು, ಕಚ್ವಿದ ಜಾಗವನ್ನು ಸ್ವಚ್ಚವಾಗಿತೊಳೆದು ತಕ್ಷಣವೇ ರೇಬಿಸ್ ಚುಚ್ಚುಮದ್ದನ್ನು ವೈದ್ಯರ ಸಲಹೆಯಂತೆ ಕಚ್ಚಿದ ಮೊದಲ ದಿನ, 3ನೇ ದಿನ, 7ನೇ ದಿನ,14 ನೇಯ ದಿನ ಹಾಗೂ 28 ದಿನ ತಪ್ಪದೆ ಲಸಿಕೆ ಪಡೆಯಲು ಜನತೆಗೆ ಹೆಚ್ಚು ಜಾಗೃತಿ ನೀಡಲು ತಿಳಿಸಿದರು. ಅಲ್ಲದೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತ ಮತ್ತು ನಾಯಿ ಕಡಿತಕ್ಕೆ ಔಷಧಿ ಲಭ್ಯವಿರುವ ಬಗ್ಗೆ ಜನತೆಗೆ ಜಾಗೃತಿ ನೀಡಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಹಾಗೂ ಡಿಎಮ್ಓ ಡಾ ಗಣೇಶೆ ಕೆ, ಜಿಲ್ಲಾ ಎನ್ಪೋರ್ಸ್ಮೆಂಟ್ ಅಧಿಕಾರಿ ಡಾ ಶಿವಕುಮಾರ್ ನಾರಾ, ಡಿಪಿಡಿಓ ಡಾ ಚಂದ್ರಶೇಖೆಯ್ಯ ಸ್ವಾಮಿ ಸೇರಿದಂತೆ ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಸಲಹೆಗಾರರು, ಸಂಯೋಜಕರು, ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಗಳು, ಬಿಪಿಎಮ್, ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.


