ತಾಳಿಕೋಟಿ – ರಾಷ್ಟ್ರೀಯ ಸೇವಾ ಯೋಜನೆಯು ಕಾಲೇಜು ಮಟ್ಟದ ವಿದ್ಯಾರ್ಥಿಗಳಲ್ಲಿ ಪ್ರತಿಯೊಂದು ಹಂತದಲ್ಲೂ ಬದಲಾವಣೆ ತರುತ್ತದೆ. ಸ್ವಯಂ ಸೇವಕರು ಶ್ರಮದ ಮಹತ್ವ ಅರಿತು ಗೌರವ ನೀಡುವುದನ್ನು ಕಲಿಯಬೇಕು ಎಂದು ವೀ.ವಿ. ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ಹೇಳಿದರು. ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದ ದತ್ತು ಗ್ರಾಮ ಆಶ್ರಯ ಕಾಲೋನಿ ಆವರಣದಲ್ಲಿ ಏರ್ಪಡಿಸಿದ್ದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ರಾಜು ಕಪಾಲಿ ಮಾತನಾಡಿ ಎನ್. ಎಸ್. ಎಸ್ ಎಂದರೆ ನಾನು ಸೇವೆಗೆ ಸದಾ ಸಿದ್ಧ ಎಂಬ ಅರ್ಥವನ್ನು ನೀಡಲಾಗಿದ್ದು ಪ್ರಶಿಕ್ಷಣಾರ್ಥಿಗಳು ಶ್ರಮಧಾನದಲ್ಲಿ ಭಾಗವಹಿಸಿ ನಮ್ಮೆಲ್ಲರ ಆದ್ಯ ಕರ್ತವ್ಯವಾದ ಪರಿಸರ ಸಂರಕ್ಷಣೆ ಮಾಡಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳು ದೇಶ ಕಟ್ಟುವಂತಹ ಪ್ರಗತಿಪರ ಚಿಂತನೆಗಳನ್ನ ಮಾಡಬೇಕು ಎಂದರು. ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎ.ಎ.ಗಂಗನಗೌಡರ ಪ್ರಸ್ತಾವಿಕವಾಗಿ ಮಾತನಾಡಿ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರವು ರಾಷ್ಟ್ರೀಯ ಸೇವಾ ಯೋಜನೆಯ (NSS) ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಇದು ಏಳು ದಿನಗಳ ಕಾಲ ನಡೆಯುತ್ತದೆ ಮತ್ತು ಸ್ವಯಂಸೇವಕರು ಗ್ರಾಮೀಣ ಪ್ರದೇಶದಲ್ಲಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಈ ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಅರಿವು ಮೂಡಿಸುತ್ತವೆ ಮತ್ತು ನೀರು, ನೈರ್ಮಲ್ಯ, ಆರೋಗ್ಯ ಮುಂತಾದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ. ಬಂಟನೂರ ಪ್ರತಿಜ್ಞಾವಿಧಿಯನ್ನ ಬೋಧಿಸಿ ಮಾತನಾಡಿ ಗಾಂಧೀಜಿಯವರ ಶತವರ್ಷವಾದ 1969ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು ಗಾಂಧೀಜಿಯವರು ಹೇಳಿದಂತೆ ಗ್ರಾಮದ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾದಂತೆ ಎಂಬ ಮಾತಿನಂತೆ ಪರಿಸರ ಸಂರಕ್ಷಣೆ ಗ್ರಾಮ ಅಭಿವೃದ್ಧಿಗೆ ಪ್ರಾತಿನಿಧ್ಯತೆ ನೀಡಬೇಕು ಎಂದು ತಿಳಿಸಿ ಇದರ ಮುಖ್ಯ ಉದ್ದೇಶವು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು. ಹಾಗೂ ಇದರೊಂದಿಗೆ ರಾಷ್ಟ್ರ ಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ ಅವರು ಏಳು ದಿನಗಳ ಕಾಲ ನಡೆಯುವ ವಾರ್ಷಿಕ ವಿಶೇಷ ಶಿಬಿರ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಶಿನಾಥ ಎಸ್ ಮುರಾಳ ವೈಸ್ ಚೇರರ್ಮನ್ನರು ವೀ.ವಿ .ಸಂಘ ತಾಳಿಕೋಟಿ, ಎಂ.ಎಸ್.ವೀರಕ್ತಮಠ ಚೇರರ್ಮನ್ನರು ಎಸ್.ಕೆ ಕನ್ನಡ ಹಾಗೂ ಆಂಗ್ಲಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಪ್ರೌಢಶಾಲೆ ತಾಳಿಕೋಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸರ್ವ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾವೇರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಲ್ಪನಾ ಕಟ್ಟಿಮನಿ ಸ್ವಾಗತಿಸಿ ಪರಿಚಯಿಸಿದರು. ನಿವೇದಿತಾ ಸಂಗಡಿಗರು ಎನ್‌ಎಸ್‌ಎಸ್‌ ಗೀತೆಯನ್ನು ಹಾಡಿದರು. ದೀಪಿಕಾ ವಂದನಾರ್ಪಣೆ ನೆರವೇರಿಸಿದರು. ಕೀರ್ತಿ ಹಂದ್ರಾಳ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *