ರಾಯಚೂರು,ಮಾ.25: ಸರಕಾರದ ಮಹತ್ವಾಕಾಂಕ್ಷಿ ಅಭಿಯಾನವಾದ ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲಬಾರದು, ಸಂತಸದ ಜೀವನಕ್ಕಾಗಿ ಪ್ರಸ್ತುತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹಾಕಲಾಗುವ ಹೆಚ್.ಪಿ.ವಿ ಲಸಿಕೆಯನ್ನು ಪಾಲಕರು ಯಾವುದೆ ಹಿಂದೇಟು ಹಾಕದೆ, ಲಸಿಕೆ ಬಗ್ಗೆ ತಪ್ಪು ಸುದ್ದಿಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಲು ಎಲ್ಲರೂ ಮುಂದೆ ಬರಬೇಕು, ಇದಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ವಸತಿ ನಿಲಯಗಳನ್ನು ಹೊಂದಿರುವ ವಿವಿಧ ಕಲ್ಯಾಣ ಇಲಾಖೆಗಳು ಕೈಜೊಡಿಸಲು ರಾಯಚೂರು ತಹಶೀಲ್ದಾರ ಸುರೇಶ ವರ್ಮಾ ತಿಳಿಸಿದರು.
ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಮೂಲಕ ಡಿಹೆಚ್ಓ ಕಾರ್ಯಾಲಯದ ತುಂಗಾ ಭವನದಲ್ಲಿ ಜರುಗಿದ ಹೆಚ್ಪಿವಿ ಲಸಿಕೆ ವಿಶೇಷ ಸಭೆಯಲ್ಲಿ ಮಾತನಾಡಿ, ಯಾವುದೇ ಸರಕಾರ ಜನತೆಗೆ ಉತ್ತಮವಾದ, ದೀರ್ಘಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯದಾಗುವ ಯೋಜನೆ ರೂಪಿಸುತ್ತವೆ, ಅದರಂತೆ ಪ್ರಸುತ್ತ 14 ವರ್ಷದ ಶಾಲಾ ಮಕ್ಕಳಿಗೆ ಹೆಚ್ಪಿವಿ ಲಸಿಕೆ ಹಾಕುವ ಉದ್ದೇಶವು, ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವದಾಗಿದೆ. ಆದ್ದರಿಂದ ಶಾಲೆ, ಬಾಲಕಿಯರ ವಸತಿ ನಿಲಯಗಳಲ್ಲಿ ಈ ಕುರಿತು ಲಸಿಕೆ ವಂಚಿತರಿಗಾಗುವ ಗಂಭೀರ ಸಮಸ್ಯೆಗಳ ಬಗ್ಗೆ ತಿಳಿಸಿ, ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಅರ್ಹರಾದ ಎಲ್ಲ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲು ತಿಳಿಸಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ ನಂದೀತಾ ಎಮ್ ಎನ್ ಸಭೆಗೆ ಮಾಹಿತಿ ನೀಡಿ, ಗ್ರಾಮೀಣ ಪ್ರದೇಶದಲ್ಲಿ ಅಡೆತಡೆ ಇಲ್ಲ, ಆದರೆ ನಗರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪ್ರಗತಿ ನಿಧಾನವಾಗುತ್ತಿದ್ದು, ಅಂತ ಪ್ರದೇಶದ ಜನರಿಗೆ ಹಾಗೂ ಇತರರಿಗೂ ವ್ಯಾಪಕ ಪ್ರಚಾರವನ್ನು ನೀಡಲು ಧಾರ್ಮಿಕ ಮುಖಂಡರ, ಧರ್ಮ ಗುರುಗಳ ಸಹಾಯದೊಂದಿಗೆ ವಿಡಿಯೋ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೀಡಲು ಕ್ರಮ ವಹಿಸಲಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಹಾಕಲಾಗುತ್ತಿದೆ,
ದಯವಿಟ್ಟು ಗರ್ಭಕಂಠದ ಕ್ಯಾನ್ಸರ್ ತಡೆಗೆ ಈ ಲಸಿಕೆ ಅತ್ಯಂತ ಉಪಯುಕ್ತವಾಗಿದೆ. ಮಾರುಕಟ್ಟೆಯಲ್ಲಿ ದೊರಕುವ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಪಾವತಿಸಿ ಸ್ವಯಂವಾಗಿ ಲಸಿಕೆ ಹಾಕಿಸುತ್ತಿದ್ದಾರೆ. ಆದ್ದರಿಂದ ಸರಕಾರವೇ ಉಚಿತವಾಗಿ ಹಾಕುತ್ತಿರುವ ವ್ಯವಸ್ಥೆ ಕಲ್ಪಿಸಿದ್ದು, ಅನಗತ್ಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ, 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆಯನ್ನು ಪೋಷಕರು ತಾವಾಗಿಯೇ ತಮ್ಮ ಮಕ್ಕಳಿಗೆ ತಪ್ಪದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸಲು ಮುಂದೆ ಬರಲು ಎಲ್ಲರ ಸಹಕಾರಕ್ಕಾಗಿ ತಿಳಿಸಿದರು.
ಗರ್ಭಕಂಠದ ಕ್ಯಾನ್ಸರ್ಗೆ ಕಾರಣಗಳು:
ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಹೂಮನ್ ಪ್ಯಾಪಿಲೋಮ ವೈರಸ್ (ಹೆಚ್.ಪಿ.ವಿ) ಸೋಂಕು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.
ಈ ಹಿನ್ನಲೆಯಲ್ಲಿ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆಯು ಸೂಕ್ತವಾಗಿದೆ.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ ಅಮೃತ ಹುಕ್ಕೇರಿ, ಶಿಕ್ಷಣ ಇಲಾಖೆಯ ಬಿಆರ್ಸಿ ಅಧಿಕಾರಿ ಯುನಸ್ ಬಾಬು, ಇಸಿಓ ರಾಮಕೃಷ್ಣ, ವೈದ್ಯಾಧಿಕಾರಿಗಳಾದ ಡಾ ಪರ್ಹಾನ್ ನಸ್ರೀನ್ ಖಾಜಿ, ಡಾ ಸುನೀಲ್, ಡಾ ಗುಂಡಮ್ಮ, ಡಾ ಅಸ್ಫಾಕ್ ಹುಸೇನ್ ಡಿಹೆಚ್ಇಓ ಈಶ್ವರ ಹೆಚ್ ದಾಸಪ್ಪನವರ, ಹಿರಿಯ ಹೆಚ್ಐಓ ಸುರೇಶ್, ಬಿಹೆಚ್ಇಓ ಸರೋಜಾ ಕೆ, ಹಿರಿಯ ಪಿಹೆಚ್ಸಿಓ ಈರಮ್ಮ, ಎಮ್ಅ್ಯಂಡ್ಇ ಗುರುಗಂಪಾ, ಬಿಪಿಎಮ್ ವರಲಕ್ಷ್ಮೀ, ತಾಲೂಕಾ ಆಶಾ ಮೇಲ್ವಿಚಾರಕಿ ಮರಿಯಾಳಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

