ಒಂದು ಕಾಲಕ್ಕೆ ಗೋಡೆಗಳ ಮೇಲೆ ವಿಜಯನಗರದ ಉಕ್ಕು ನಮ್ಮ ಹಕ್ಕು ಎನ್ನುವ ಘೋಷಣೆಗಳನ್ನು ಕೇಳುತ್ತಿದ್ದೆವು. ಮೂರು ದಶಕಗಳಲ್ಲಿ ಎಂಥ ನಾಟಕೀಯ ಬದಲಾವಣೆಗಳಾಗಿವೆ. ಯಾವ ಕಾರ್ಖಾನೆಗಳು ದೇವರಂತೆ ಬಂದು ನಮ್ಮನ್ನು ಉದ್ದರಿಸಬೇಕು ಎಂದು ಯೋಚಿಸಿದ್ದೆವೊ ಅವೇ ಈಗ ಶಾಪಗ್ರಸ್ತವಾಗಿವೆ’ ಎಂದು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಬೇಸರ ವ್ಯಕ್ತಪಡಿಸಿದರು.ನಗರದ ಗಾಣಿಗೇರ ಭವನದಲ್ಲಿ ತಿರುಳನ್ನಡ ಸಾಹಿತಿಗಳ ಸಹಕಾರ ಸಂಘ, ಗಾಣದ ಕಣ್ಣಪ್ಪ ಪತ್ತಿನ ಸಹಕಾರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೊ. ಕೊರಗಲ್‌ ವಿರೂಪಾಕ್ಷಪ್ಪನವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಮಕ್ಕಳಿಗೆ ಸಿಗುತ್ತಿರುವುದು ದೂಳು. ಸರ್ಕಾರವನ್ನು ಜಗತ್ತನ್ನು ಆಳುತ್ತಿರುವುದು ಕಾರ್ಪೋರೇಟ್‌ ವಲಯ’ ಎಂದರು.

ಸಸಿಗೆ ನೀರು ಎರೆಯುವುದರ ಬದಲು ಸಸಿಯ ಮೇಲೆ ಕುಳಿತ ದೂಳನ್ನು ನೀರು ಹಾಕಿ ತೊಳೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ‘ಮಾಲಿನ್ಯ ಇದು ಗಾಳಿಗೆ ಸಂಬಂಧಿಸಿದ್ದಲ್ಲ ಇದು ಪ್ರಜಾಸತ್ತೆಯ ಮಾಲಿನ್ಯ. ಯಾವುದೇ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಊರಿನ ಸಮಸ್ಯೆಯು ಅದರ ತಲೆಬರಹವಾಗಿ ಬಂದಿದ್ದು ಇದೇ ಮೊದಲು ಇರಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಬರಹ ಎನ್ನುವುದು ಮಧ್ಯಮ ವರ್ಗದವರ ವಿಲಾಸವಲ್ಲ. ಜನರ ನೋವಿಗೆ ಸ್ಪಂದಿಸದಿದ್ದರೆ ಅದಕ್ಕೆ ಅರ್ಥವಿಲ್ಲ. ಕೊಪ್ಪಳ ನನ್ನನ್ನು ವೈಚಾರಿಕವಾಗಿ ಬೆಳೆಸಿದ ಕರ್ಮಭೂಮಿ. ಪುಸ್ತಕಗಳು ಬಹಳಷ್ಟಿವೆ. ಆದರೆ ವೈಚಾರಿಕ ಸ್ಪಷ್ಟತೆ ಮುಖ್ಯ. ಪ್ರಜಾಪ್ರಭುತ್ವಕ್ಕಷ್ಟೇ ಅಲ್ಲ ಇಂದಿನ ದಿನಗಳಲ್ಲಿ ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ’ ಎಂದರು.

ಇದಕ್ಕೂ ಮೊದಲು ರೇಷ್ಮೆ ಕೌದಿ (ವೈಚಾರಿಕ ಬರಹಗಳು) ಕುರಿತು ಹಿರಿಯ ಸಾಹಿತಿ ಎ.ಎಂ.ಮದರಿ, ವೈತರಣಿಯಲ್ಲಿ ಹೆಣ್ಣು (ಕಥಾ ಸಂಕಲನ) ಕುರಿತು ಸಾಹಿತಿ ಸಾವಿತ್ರಿ ಮುಜುಮದಾರ ಮಾತನಾಡಿದರು. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿಗಳಾದ ಎಚ್‌.ಎಸ್‌. ಪಾಟೀಲ, ಕೆ.ಬಿ.ಬ್ಯಾಳಿ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ತೋಟಪ್ಪ ಕಾಮನೂರ, ಕೊಪ್ಪಳ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕ ಪ್ರವೀಣ ಪೊಲೀಸ ಪಾಟೀಲ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಟಿ. ಪಾಟೀಲ, ಲೇಖಕ ವಿರೂಪಾಕ್ಷಪ್ಪ ಕೊರಗಲ್, ಅರುಣಾ ನರೇಂದ್ರ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *