ಹಿರೇಮಾದಿನಾಳ ಗ್ರಾಮದ ಪ್ರಸನ್ನ ವೀರಾಂಜನೇಯ ದೇವರ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ ಮಂತ್ರಾಲಯದ ಕ್ರಿಷ್ಣಾಚಾರ್ಯ ರಾಜಪುರೋಹಿತ ಹಾಗೂ ಎಂ.ಜಯಸಿಂಹಾಚಾರ್ಯ ನೇತೃತ್ವದಲ್ಲಿ ರಥಾಂಗ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ದಾ, ಭಕ್ತಿಯಿಂದ ಜರುಗಿದವು.ಬಾಲಗೋಪಾಲದಾಸ ಹಾಗೂ ಶಕುಂತಲಾ ಅವರು ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಿದರು.
ರಥೋತ್ಸವ ನಡೆದಾಗ ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಧನ್ಯತೆ ಮೆರೆದರು. ಹಿರೇಮಾದಿನಾಳ, ಚಿಕ್ಕಮಾದಿನಾಳ, ಅಗೋಲಿ, ವಿಠಲಾಪುರ, ನಾಗಲಾಪುರ, ರಾಮದುರ್ಗ, ಬಂಕಾಪುರ ಭಾಗವಹಿಸಿದ್ದರು. ಹೂವು, ದವನ, ಕಾಯಿ, ಕರ್ಪೂರ ಇತರೆ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ಗರುಡೋತ್ಸವ: ಪ್ರಸನ್ನ ವೀರಾಂಜನೇಯಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಈ ನಿಮಿತ್ತ ದೇಗುದಲ್ಲಿ ಸೀತಾರಾಮ ಕಲ್ಯಾಣೋತ್ಸವ ಶ್ರದ್ಧೆ, ಭಕ್ತಿಯಿಂದ ನಡೆಯಿತು. ಮಂಗಳಾರುತಿ ಮಾಡುವ ಮೂಲಕ ಗರುಡೋತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ಬೀದಿಯಿಂದ ಅಗಸಿ ಬಾಗಿಲಿನ ಬಸವಣ್ಣ ದೇವಸ್ಥಾನದವರೆಗೆ ನಂತರ ವೀರಾಂಜನೇಯ ದೇವಸ್ಥಾನಕ್ಕೆ ತಲುಪಿತು. ಭಕ್ತರು ಗೋವಿಂದಾ, ಗೋವಿಂದಾ ಎಂಬ ನಾಮ ಸ್ಮರಣೆ ಮಾಡಿದರು. ದೀವಟಗಿ ಹಿಡಿದು ಕರ್ಪೂರ ದಹಿಸಿದರು.

