ರಾಯಚೂರು ಮಾರ್ಚ್ 12 (ಕರ್ನಾಟಕ ವಾರ್ತೆ): ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸುವ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ಉದ್ದೇಶದಿಂದ ಸಂಜೀವಿನಿ ಇ-ಮಾರ್ಟ್ ಆರಂಭಿಸಿದ್ದು, ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಸಂಜೀವಿನಿ ಇ-ಮಾಟ್ ಉತ್ತೇಜನಕಾರಿ ಎಂದು ಮಾನವಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಖಾಲೀದ್ ಅಹ್ಮದ್ ಅವರು ಹೇಳಿದರು.

ಮಾರ್ಚ್ 12ರ ಗುರುವಾರ ದಂದು ಜಿಲ್ಲೆಯ ಮಾನವಿ ಪಟ್ಟಣದ ಹಳೇ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತಾಲೂಕು ಪಂಚಾಯಿತಿ ಮಾನವಿ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೂತನವಾದ ಸಂಜೀವಿನಿ ಇ-ಮಾರ್ಟ್ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಯೋಜನೆ ಅಡಿಯಲ್ಲಿ ಸಂಜೀವಿನಿ ಇ-ಮಾಟ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸುವ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀನಿಧಿ ಸಂಜೀವಿನಿ ಮಹಿಳಾ ಸಂಘಕ್ಕೆ ನೀಡಲಾಗಿದೆ ಎಂದರು.

ಸಂಜೀವಿನಿ ಇ-ಮಾರ್ಟ್ ಕೇಂದ್ರ ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸಲಿದ್ದು, ಮಹಿಳಾ ಸಂಘದ ಸದಸ್ಯರು ಉತ್ಪನ್ನಗಳ ಸಂಗ್ರಹ, ಗುಣಮಟ್ಟ ಪರಿಶೀಲನೆ, ಪ್ರದರ್ಶನ ಹಾಗೂ ಮಾರಾಟದ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ. ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದರ ಜೊತೆಗೆ ಗ್ರಾಹಕರಿಗೂ ಗುಣಮಟ್ಟದ ವಸ್ತುಗಳು ಲಭ್ಯವಾಗಲಿವೆ. ಇ-ಮಾರ್ಟ್ ವ್ಯವಸ್ಥೆಯ ಮೂಲಕ ಮಹಿಳಾ ಸ್ವ-ಸಹಾಯ ಸಂಘಗಳು ತಮ್ಮ ಉತ್ಪನ್ನಗಳನ್ನು ವ್ಯಾಪಕವಾಗಿ ಪರಿಚಯಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಮಾರುಕಟ್ಟೆ ಸೌಲಭ್ಯಗಳ ಕೊರತೆಯಿಂದ ಅನೇಕ ಉತ್ಪನ್ನಗಳು ಸ್ಥಳೀಯ ಮಟ್ಟದಲ್ಲೇ ಸೀಮಿತವಾಗಿದ್ದವು. ಈಗ ಈ ಹೊಸ ವ್ಯವಸ್ಥೆಯಿಂದ ಗ್ರಾಮೀಣ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿನ ಮಹಿಳಾ ಸಂಘದ ಸದಸ್ಯರು ಈ ಹೊಸ ಜವಾಬ್ದಾರಿಯನ್ನು ಉತ್ಸಾಹದಿಂದ ಸ್ವೀಕರಿಸಿದ್ದು, ತಮ್ಮ ಉತ್ಪನ್ನಗಳಿಗೆ ಉತ್ತಮ ಮೌಲ್ಯ ದೊರೆಯುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಕೇಂದ್ರಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಕುಟುಂಬಗಳ ಆರ್ಥಿಕ ಸ್ಥಿತಿಗೂ ಸಹಕಾರಿಯಾಗಲಿದೆ ಎಂದರು.

ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕಿ ದೀಪಾ ಅರಳಿಕಟ್ಟೆ ಅವರು ಮಾತನಾಡಿ, ಸಂಜೀವಿನಿ ಇ-ಮಾರ್ಟ್ ಮೂಲಕ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುವುದರಿಂದ ಗ್ರಾಮೀಣ ಆರ್ಥಿಕತೆಯೂ ಚೇತರಿಸಿಕೊಳ್ಳಲಿದೆ. ಮಹಿಳಾ ಸಂಘಗಳಿಗೆ ನೀಡಲಾದ ಈ ಜವಾಬ್ದಾರಿ ಅವರ ಸಾಮರ್ಥ್ಯವನ್ನು ತೋರಿಸುವುದರ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮ್ಯಾನೇಜರ್ ಬಸವರಾಜ, ಎನ್.ಆರ್.ಎಲ್.ಎಮ್ ವಲಯ ಮೇಲ್ವಿಚಾರಕ ಶರಣು ಬಸವ, ಕೃಷಿಯೇತರ ವ್ಯವಸ್ಥಾಪಕ ಮಹಾಂತೇಶ, ಐ.ಎಫ್.ಸಿ ಸಂಯೋಜಕ ವಿನೋದ್, ಡಿಇಓ ಬಸವರಾಜ, ವೈಪಿ ಕಲ್ಪನಾ, ತಾಲೂಕು ಮಟ್ಟದ ಸಂಪನ್ಮೂಲ ವ್ಯಕ್ತಿ ರುದ್ರಮ್ಮ, ಚನ್ನಬಸ್ಸಮ್ಮ, ತಾಲೂಕು ಪಂಚಾಯಿತಿ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಶ್ರೀನಿಧಿ ಸ್ವ-ಸಹಾಯ ಸಂಘ ಮಹಿಳೆಯರ ಹಾಗೂ ಒಕ್ಕೂಟದ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *