ಮಾನ್ವಿ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಿಜಶರಣ ಅಂಬಿಗಾರ ಚೌಡಯ್ಯ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭ ಅಂಬಿಗಾರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರು, 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪದ ಮೂಲಕ ಪ್ರಪಂಚಿಕ ಜೀವನದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಮಹತ್ವವನ್ನು ಸ್ಮರಿಸಿದರು. ಶರಣರು ಮಾತಿನ ಮೂಲಕ ನೀಡಿದ ಪ್ರಮಾಣವನ್ನೇ ವಚನ ಎಂದು ಕರೆಯಲಾಗುತ್ತಿದ್ದು, ಶರಣರಲ್ಲಿ ಅಂಬಿಗಾರ ಚೌಡಯ್ಯನವರು ‘ನಿಜಶರಣ’ ಎಂಬ ಗೌರವ ಪಡೆದಿರುವುದು ಅವರ ವೈಚಾರಿಕ ಶ್ರೇಷ್ಠತೆಯ ಪ್ರತೀಕವಾಗಿದೆ ಎಂದರು.
ಅಂಬಿಗಾರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ವಿಡಂಬನೆ ಸ್ಪಷ್ಟವಾಗಿ ಕಾಣುತ್ತದೆ. ಇಂದಿಗೂ ವಚನಗಳ ತಾರ್ಕಿಕತೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಶರಣರ ವಚನಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಅವರ ಜೀವನ ಹಾಗೂ ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ವೇಳೆ ಬಸವರಾಜ ಚೌಡ್ಲಿ ಅವರು ನಿಜಶರಣ ಅಂಬಿಗಾರ ಚೌಡಯ್ಯನವರ ಜೀವನ ಮತ್ತು ತತ್ವಾದರ್ಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್–2 ತಹಶೀಲ್ದಾರ್ ಅಬ್ದುಲ್ ವಾಹಿದ್, ತಾಲೂಕು ಗಂಗಮತಸ್ಥರ ಸಮಾಜದ ಅಧ್ಯಕ್ಷ ವೆಂಕಟೇಶ ಸುಂಕೇಶ್ವರ, ಗೌರವಾಧ್ಯಕ್ಷ ನಾಗೇಶ ಕಬ್ಬೆರ, ಬೀಮರಾಯ ಸೀತಮನಿ, ನಿವೃತ್ತ ಎ.ಎಸ್.ಐ. ಈರಪ್ಪ, ಕಾರ್ಯದರ್ಶಿ ಮಂಜುನಾಥ ಮಾಡಗಿರಿ, ಬಸಪ್ಪ, ಮಹಾದೇವಪ್ಪ, ಕಾಶಿನಾಥ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

