ಮಾನ್ವಿ -: ತಾಲೂಕು ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು ಜೂ1 ರಂದು ತಾಲೂಕಿನಲ್ಲಿ ಶಾಲೆಗಳ ಪ್ರಾರಂಭಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಾನ್ವಿ, ಸಿರವಾರ, ಮಸ್ಕಿ ತಾಲೂಕಿನ ಕೆಲವು ಹಳ್ಳಿಗಳು ಸೇರಿ ಮೂರು ತಾಲೂಕಿಗೆ ಒಂದೇ ಶಿಕ್ಷಣ ಕಚೇರಿ ಇದ್ದು, ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಅಖಂಡ ಮಾನ್ವಿಗೆ ಒಂದೇ ಕಚೇರಿ ಇರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿರುವುದರಿಂದ ಗುಣಮಟ್ಟದ ಶಿಕ್ಷಣದ ಮೇಲೆ ಪರಿಣಾಮ ಉಂಟಾಗುತ್ತಿದ್ದು ಸಿರವಾರ ತಾಲೂಕಿಗೆ ಪ್ರತ್ಯಕ ಶಿಕ್ಷಣ ಇಲಾಖೆ ಕಚೇರಿ ಪ್ರಾರಂಭ ಮಾಡಬೇಕಾಗಿದೆ.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳು ಸೇರಿದಂತೆ ಸಮವಸ್ತ್ರ ಕಲಿಕಾ ಉಪಕರಣಗಳನ್ನು ವಿತರಿಸುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭದಲ್ಲಿ ನೀಡಲಾಗುತ್ತಿದೆ.
ಕಚೇರಿ ವ್ಯಾಪ್ತಿಯ ಮಾನ್ವಿ ಸಿರವಾರ ಹಾಗೂ ಮಸ್ಕಿ ತಾಲೂಕಿನ ಕೇಲವು ಗ್ರಾಮಗಳು ಸೇರಿ ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು 273, ಪ್ರೌಡಶಾಲೆಗಳು 43 ಸೇರಿ ಒಟ್ಟು 316 ಶಾಲೆಗಳು, ಅನುದಾನಿತ ಪ್ರಾಥಮಿಕ ಶಾಲೆಗಳು 6, ಪ್ರೌಡಶಾಲೆ 1,ಅನುದಾನ ರಹಿತ ಖಾಸಗಿ ಶಾಲೆಗಳು 101, ಪ್ರೌಡಶಾಲೆ 25, ವಸತಿ ಶಾಲೆ 11, ವಸತಿರಹಿತ ಶಾಲೆ 1, ಕಸ್ತೂರಿ ಬಾ ಗಾಂಧಿ ಶಾಲೆ ಮಲ್ಲಟ, ಕರ್ನಾಟಕ ಪಬ್ಲಿಕ್ ಶಾಲೆ 2, ತಾಲೂಕಿಗೆ ನೂತನವಾಗಿ 8 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿವೆ. ಒಟ್ಟು 68,206 ವಿದ್ಯಾರ್ಥಿಗಳು ತಾಲೂಕಿನ ವಿವಿಧ ಶಾಲೆಗಳಲ್ಲಿ ಅಭ್ಯಾಸ
ಮಾಡುತ್ತಿದ್ದಾರೆ.
ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ಮಂಜೂರಾಗಿರುವ ಶಿಕ್ಷಕರ ಹುದ್ದೆಗಳು 1569 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು 625 ಖಾಲಿ ಇರುವ ಶಿಕ್ಷಕರ ಸಂಖ್ಯೆ 944, ಸರ್ಕಾರಿ ಪ್ರೌಡಶಾಲೆಗಳಲ್ಲಿ ಒಟ್ಟು ಮಂಜೂರಾಗಿರುವ ಶಿಕ್ಷಕರ ಹುದ್ದೆಗಳು 418 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು 186, ಖಾಲಿ ಇರುವ ಶಿಕ್ಷಕರ ಸಂಖ್ಯೆ 236 ಇದ್ದು ಇಷ್ಟೆಲ್ಲ ಶಿಕ್ಷಕರ ಕೊರತೆ ನಡುವೆ ಶಿಕ್ಷಣ ಇಲಾಖೆ ಈ ವರ್ಷ ಅದೇಗೆ ಉತ್ತಮ ಕಲಿಕಾ ಶಿಕ್ಷಣ ನೀಡುತ್ತದೆಯೋ ಕಾದು ನೋಡಬೇಕು.
ಇನ್ನೂ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಬಳಕೆ ನೀರು, ಶೋಚಾಲಯ, ಕೊಠಡಿಗಳ ಕೊರತೆ, ಮಳೆ ಬಂದರೆ ಸೋರುವ ಕೊಠಡಿಗಳು, ಮರಗಳು ಇಲ್ಲದೆ ನೆರಳಿನ ಕೊರತೆ, ಮಕ್ಕಳು ಕುಳಿತುಕೊಳ್ಳಲು ಬೆಂಚುಗಳ ಕೊರತೆ, ಶಾಲಾ ಗ್ರಂಥಾಲಯ ಕೊರತೆ, ಉತ್ತಮ ಬಿಸಿಯೂಟ ಕೊರತೆ ಹೀಗೆ ಅನೇಕ ಕೊರತೆಗಳನ್ನು ಸರಿಪಡಿಸಿಕೊಂಡು ಹೋಗಬೇಕಾದ ಹೆಚ್ಚಿನ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ.
ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಮೇ 30-31 ರಂದು ಸ್ವಚ್ಚತಾ ದಿನವಾಗಿ ಆಚರಿಸಿ ಶಾಲೆಗಳನ್ನು ಸ್ವಚ್ಚಮಾಡಲಾಗುವುದು. ಜೂ1 ರಂದು ಶಾಲಾ ಪ್ರಾರಂಭೋತ್ಸವವನ್ನು ಆಚರಿಸಿ ಪ್ರಸ್ತುತ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಗುವು ದು. ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬುವುದಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಿಸಿಯೂಟ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಶಾಸಕರ ನೇತೃತ್ವದಲ್ಲಿ ಪಾಲಕ ಪೋಷಕರ ಮಹಾಸಭೆಯನ್ನು ಕರೆದು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ಕಲಿಕಾ ಸಾಮಾಗ್ರಿಗಳ ವಿತರಣೆ ಮಾಡಲಾಗುವುದು.
-:ಚಂದ್ರಶೇಖರ ದೊಡ್ಡಮನಿ ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿ

