ಗವಿಮಠದ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯ ಸ್ಮರಣೆ ಅಂಗವಾಗಿ ನಗರದ ಮಳೇ ಮಲ್ಲೇಶ್ವರ ಬೆಟ್ಟದಿಂದ ಗವಿಮಠದವರೆಗೆ ಗುರುವಾರ ಅಪಾರ ಭಕ್ತಗಣ ಪಾದಯಾತ್ರೆ ನಡೆಸಿತು. ಅಭಿನವ ಗವಿಶ್ರೀಗಳು ಭಕ್ತವೃಂದದೊಂದಿಗೆ ಹೆಜ್ಜೆ ಹಾಕಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೊಪ್ಪಳ ಸೇರಿ ಗ್ರಾಮೀಣ ಭಾಗದ ಜನರೊಂದಿಗೆ ಯಶಸ್ವಿಯಾಗಿ ಯಾತ್ರೆ ನಡೆಯಿತು.ಬೆಳಗ್ಗೆ 6 ಗಂಟೆಗೆ ಆರಂಭವಾಗಿ 9 ಗಂಟೆ ವೇಳೆಗೆ ಮಠ ತಲುಪಿತು. ಮಳೆಮಲ್ಲೇಶ್ವರ ದೇವಸ್ಥಾನದಿಂದ ಅಶೋಕವೃತ್ತ, ಗಡಿಯಾರ ಕಂಬ ವೃತ್ತ ಮಾರ್ಗವಾಗಿ ಶ್ರೀಮಠ ತಲುಪಿತು. ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಹೂವಿನಹಡಗಲಿಯ ಶ್ರೀ ಡಾ.ಹಿರಿಶಾಂತವೀರ ಸ್ವಾಮೀಜಿ, ಕಡಲಬಾಳಿನ ಶ್ರೀ ಮರಿಶಾಂತವೀರ ಸ್ವಾಮೀಜಿ, ಬಿಸರಳ್ಳಿಯ ಶ್ರೀ ಶಿವಶಾಂತವೀರ ಸ್ವಾಮೀಜಿ, ಚಿಕ್ಕಮ್ಯಾಗೇರಿ ಮೇಲುಗದ್ದುಗೆ ಹಿರೇಮಠದ ಶ್ರೀ ಗುರುಶಾಂತವೀರ ಸ್ವಾಮಿಗಳು ಭಾಗಿಯಾಗಿದರು.
ವಿವಿಧ ಗ್ರಾಮಗಳ ಭಕ್ತರು, ಶಾಲಾ&ಕಾಲೇಜು ವಿದ್ಯಾರ್ಥಿಗಳು ಪಾದಯಾತ್ರೆ ಮಾಡಿದರು. ದಾರಿಯಲ್ಲಿ ಯಾತ್ರಿಗಳು ಸ್ವಯಂ ಸೇವಕರು ಹಣ್ಣು ನೀಡಿ ಸೇವೆಗೈದರು. ಯಾತ್ರೆ ಬಳಿಕ ಗವಿಸಿದ್ಧೇಶ್ವರ, ಶಿವಶಾಂತವೀರ ಶ್ರೀಗಳ ಕರ್ತೃ ಗದ್ದುಗೆ ದರ್ಶನ ಪಡೆದರು. ಬಳಿಕ ದಾಸೋಹದಲ್ಲಿ ಪ್ರಸಾದ ಸವಿದರು.

