ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಅಕ್ಷರಶಃ ದೇಶಿ ಕ್ರೀಡೆಗಳ ಕಲರವ ಕಂಡುಬಂದಿತು.
ಚಳಿಯ ನಡುವೆಯೂ ಲಗೋರಿ ಮತ್ತು ಚಿನ್ನಿದಾಂಡು ಸ್ಪರ್ಧೆಗಳಲ್ಲಿ ಭಾಗಿಯಾಗಲು ನಗರದ ವಿವಿಧ ಶಾಲ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಜಿಲ್ಲೆಯ ಯುವಜನರು ಇರುವ ಅಂದಾಜು 804 ಸ್ಪರ್ಧಿಗಳು ತಲಾ 12 ಜನರು ಇರುವಂತೆ ಒಟ್ಟು 67 ತಂಡಗಳಾಗಿ ಭಾಗವಹಿಸಿ ಸ್ಪರ್ಧೆಯ ಮೆರುಗು ಹೆಚ್ಚಿಸಿದರು.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಚಾಲನೆ ನೀಡಿದರು.
ಈ ಸ್ಪರ್ಧೆಗಳ ಮೇಲುಸ್ತುವಾರಿ ವಹಿಸಿದ್ಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ರಂಗಸ್ವಾಮಿ ಉಪಸ್ಥಿತರಿದ್ದರು.
ಲಗೋರಿ ಸ್ಪರ್ಧೆಯಲ್ಲಿ ಪುರುಷರ 17 ತಂಡಗಳು ಮತ್ತು ಮಹಿಳೆಯರ 16 ತಂಡಗಳು, ಚಿನ್ನಿದಾಂಡು ಸ್ಪರ್ಧೆಯಲ್ಲಿ ಪುರುಷರ 18 ತಂಡಗಳು ಹಾಗೂ ಮಹಿಳೆಯರ 16 ತಂಡಗಳು ಪಾಲ್ಗೊಂಡಿದ್ದವು.

