ರಾಯಚೂರು : ಮಹಾನಗರ ಪಾಲಿಕೆ ವತಿಯಿಂದ ಲೀಡ್ ಬ್ಯಾಂಕ್ ಹಾಗೂ ಎಸ್ಬಿಐ ಸಹಯೋಗದಲ್ಲಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಬೀದಿ ಹಾಗೂ ಸಣ್ಣ ವ್ಯಾಪಾರಿಗಳಿಗಾಗಿ ಸಾಲ ಮೇಳ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ದೇಶ ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಬಿ ಜೀವನೋಪಾಯಕ್ಕೆ ಅಗತ್ಯವಾದ ಆರ್ಥಿಕ ಸಹಾಯ ಒದಗಿಸುವುದಾಗಿದ್ದು, ಸರ್ಕಾರದ ಈ ಮಹತ್ವದ ಯೋಜನೆಯ ಬಗ್ಗೆ ಅರಿವು ಮೂಡಿಸುವುದಾಗಿದೆ.
ಸುಮಾರು 200 ಫಲಾನುಭವಿಗಳು ಭಾಗವಹಿಸಿದ್ದರು. ಇದರಲ್ಲಿ ಸುಮಾರು 50 ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡಿ ದೃಢೀಕರಿಸಲಾಯಿತು. ಸ್ವೀಕೃತಿಯಾದ ಎಲ್ಲಾ ಅರ್ಜಿಗಳನ್ನು ನಾಳೆಯೊಳಗೆ ಸಾಲ ಮಂಜೂರು ಮಾಡಲಾಗುವುದು ಎಂದು ಪ್ರಾದೇಶಿಕ ವ್ಯವಸ್ಥಾಪಕಿ ಸೀತಾಬಾಯಿ ಹೇಳಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀಂದ್ರ, ಪಾಲಿಕೆ ಅಧಿಕಾರಿ ಕೃಷ್ಣ ಶಾವಂತಗೇರಿ, ಸಂತೋಷ ರಾಣಿ, ಸುರೇಶ ವಿಭೂತಿಮಠ, ಆನಂದ ವಾಲಿ ಇದ್ದರು.

