ರಾಯಚೂರು ಜೂನ್ 15 (ಕರ್ನಾಟಕ ವಾರ್ತೆ): ಹತ್ತಿ ನಾಟಿ ಯಂತ್ರಗಳು ಹತ್ತಿ ಬೀಜಗಳನ್ನು ನಿಖರವಾದ ಆಳ ಮತ್ತು ಸಾಲುಗಳಲ್ಲಿ ಬಿತ್ತನೆ ಮಾಡಲು ಬಳಸುವ ಅತ್ಯುತ್ತಮ ಕೃಷಿ ಸಾಧನಗಳಾಗಿವೆ. ಇವು ದುಬಾರಿ ಕೂಲಿಕಾರರ ಸಮಸ್ಯೆಯನ್ನು ತಪ್ಪಿಸಿ, ಬೀಜದಿಂದ ಬೀಜಕ್ಕೆ ಹಾಗೂ ಸಾಲಿನಿಂದ ಸಾಲಿಗೆ ಸರಿಯಾದ ಅಂತರವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ ಎಂದರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌಹಾಣ್ ಅವರು ಹೇಳಿದರು.
ಜೂನ್ 15ರ ಸೋಮವಾರ ದಂದು ರಾಯಚೂರು ತಾಲೂಕಿನ ಮಿಟಿಮಲ್ಕಾಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹತ್ತಿ ಉತ್ಪಾದಕತೆ ಮಿಷನ್ ಯೋಜನೆಯ ಕ್ಷೇತ್ರ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು 5,659 ಕೋಟಿ ರೂ. ವೆಚ್ಚದಲ್ಲಿ ಹತ್ತಿ ಉತ್ಪಾದಕತೆ ಮಿಷನ್ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯು 2026ರಿಂದ 31ರವರೆಗೆ ಮಹತ್ವಾಕಾಂಕ್ಷೆಯ ಯೋಜನೆಯು ಹತ್ತಿ ಇಳುವರಿ ಹೆಚ್ಚಿಸಲು ಮತ್ತು ರೈತರ ಆದಾಯವನ್ನು ವೃದ್ಧಿಸಲು ವೈಜ್ಞಾನಿಕ ಹಾಗೂ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ ಎಂದರು.
2031ರ ವೇಳೆಗೆ ಹತ್ತಿ ಉತ್ಪಾದಕತೆಯನ್ನು ಪ್ರತಿ ಹೆಕ್ಟೇರ್ಗೆ 440 ಕೆ.ಜಿ ಯಿಂದ 755 ಕೆ.ಜಿ.ಗೆ ಹೆಚ್ಚಿಸುವುದು. ಹೆಚ್ಚಿನ ಇಳುವರಿ ನೀಡುವ, ಹವಾಮಾನ ವೈಪರೀತ್ಯ ಮತ್ತು ಕೀಟಗಳನ್ನು ತಡೆದುಕೊಳ್ಳ ಬಲ್ಲ ಬೀಜಗಳ ಅಭಿವೃದ್ಧಿ, ದಾರಗಳು ಉದ್ದವಾಗಿರುವ ಮತ್ತು ಬಲವಾಗಿರುವ ಹತ್ತಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ 14 ರಾಜ್ಯಗಳ 140 ಜಿಲ್ಲೆಗಳ ಸುಮಾರು 32 ಲಕ್ಷ ರೈತರಿಗೆ ತರಬೇತಿ ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಮೂಲಕ ನೆರವು ನೀಡಲಾಗುತ್ತದೆ ಎಂದರು.
ಹತ್ತಿ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಿಷನ್ ಹತ್ತಿ ಯೋಜನೆಯನ್ನು 2026-27 ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಹತ್ತಿ ಬೆಳೆಯನ್ನು ಅಧಿಕ ಸಾಂದ್ರತೆ ಪದ್ಧತಿಯಲ್ಲಿ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ 90 ಸೇ.ಮಿ ಅಂತರ ಗಿಡ ದಿಂದ ಗಿಡ್ಡಕ್ಕೆ 15 ಸೇ.ಮಿ ಅಂತರ ಕಾಪಾಡಬೇಕು. ಈ ಅಂತರ ಮಟ್ಟವನ್ನು ಅತ್ಯಂತ ನಿಖರತೆಯಿಂದ ನಾಟಿ ಮಾಡುವಲ್ಲಿ ಈ ಹೊಸ ಉಪಕರಣ ವಾದ ವಾಯು ಚಾಲಿತ ಬಿತ್ತನೆ ಯಂತ್ರದ ಮೂಲಕ ನಾಟಿ ಮಾಡಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ದೀಪ ಎಲ್., ಕೃಷಿ ವಿಜ್ಞಾನಿ ಡಾ.ಭೀಮಣ್ಣ, ಐಎಟಿ ಸಂಸ್ಥೆಯ ಆರ್.ಎ.ಪಾಟೀಲ್, ಪ್ರಗತಿ ಪರ ರೈತ ಸಿದ್ದನಗೌಡ ಸೇರಿದಂತೆ ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ರೈತರು ಇದ್ದರು.

